ಹಿರಿಯ ಚಿತ್ರನಟ ದೊಡ್ಡಣ್ಣ, ‘ಸ್ನೇಹ, ಉದಾರತೆ ಹಾಗೂ ಒರಟುತನಕ್ಕೆ ಅಂಬರೀಷ್ ಹೆಸರಾಗಿದ್ದರು. ಅವರಲ್ಲಿ ಕಲ್ಮಶ, ಸ್ವಾರ್ಥ ಇರಲಿಲ್ಲ. ಹಾಗಾಗಿ ಅಂಬಿ ಬೆಳೆದರು. ಅಂಬಿಗೆ ನಾಗರಹಾವು ಎಂದರೆ ಬಹಳ ಭಯ. ‘ಅರಣ್ಯದಲ್ಲಿ ಅಭಿಮನ್ಯು’ ಸಿನಿಮಾ ಚಿತ್ರೀಕರಣದ ವೇಳೆ ಹಾವುಗಳನ್ನು ತರಿಸಲಾಗಿತ್ತು. 50 ಹಾವುಗಳೊಂದಿಗೆ ಒಳಾಂಗಣದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ವಿದ್ಯುತ್ ಕಡಿತಗೊಂಡಿತ್ತು. ಆಗ ಅಂಬರೀಷ್ ಎಲ್ಲರನ್ನು ತರಾಟೆಗೆ ತೆಗೆದುಕೊಂಡಿದ್ದರು’ ಎಂದು ಘಟನೆಯೊಂದನ್ನು ಮೆಲುಕು ಹಾಕಿದರು. ‘ಚೆನ್ನೈನ ನಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ, ಅಂಬರೀಷ್, ವಿಷ್ಣುವರ್ಧನ್, ದ್ವಾರಕೀಶ್, ಶ್ರೀನಾಥ್ ತಪ್ಪದೆ ಬರುತ್ತಿದ್ದರು. ಅವರು ದೊಡ್ಡ ಕಲಾವಿದರು ಮಾತ್ರವಲ್ಲ, ಅಷ್ಟೇ ಒಳ್ಳೆಯ ಮನುಷ್ಯರೂ ಕೂಡ’ ಎಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮರಿಸಿದರು.