ಬೆಂಗಳೂರು: ‘ಪುಲ್ವಾಮಾ ದಾಳಿ ಮತ್ತು ನಂತರ ಬೆಳವಣಿಗೆಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಮ್ಯಾಚ್ ಫಿಕ್ಸಿಂಗ್ನ ಪರಿಣಾಮ’ ಎಂದು ರಾಜ್ಯಸಭೆಯಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟರು.
ಪಾಕಿಸ್ತಾನದ ಬಾಲಾಕೋಟ್ನಲ್ಲಿರುವ ಉಗ್ರರ ತರಬೇತಿ ನೆಲೆಗಳ ಮೇಲೆ ಭಾರತ ನಡೆಸಿದ ವಾಯು ದಾಳಿಗೆ ಕಾಂಗ್ರೆಸ್ ಸಾಕ್ಷ್ಯ ಕೇಳುತ್ತಿರುವ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನೀಡಿದ ಹೇಳಿಕೆಗೆ ಹರಿಪ್ರಸಾದ್ ಗುರುವಾರ ಹೀಗೆ ಪ್ರತಿಕ್ರಿಯಿಸಿದರು.
‘ಪಾಕಿಸ್ತಾನ ಮತ್ತು ಮೋದಿ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಏನಾದರೂ ನಡೆದಿದೆಯೇ ಎಂದು ರವಿಶಂಕರ್ ಅವರ ಸ್ಪಷ್ಟೀಕರಣ ನೀಡಬೇಕು. ಅವರಿಬ್ಬರ ಅರಿವಿಗೆ ಬಾರದೆ ಪುಲ್ವಾಮಾ ಘಟನೆ ನಡೆಯಲು ಸಾಧ್ಯವೇ ಇಲ್ಲ’ ಎಂದೂ ಅವರು ಹೇಳಿದರು.
‘ಪುಲ್ವಾಮಾ ದಾಳಿ ಬಳಿಕ ಸರಣಿಯಾಗಿ ನಡೆದ ಘಟನೆಗಳನ್ನು ನೀವು ಗಮನಿಸಿದರೆ, ಪಾಕಿಸ್ತಾನಿಗಳ ಜೊತೆ ಮೋದಿ ಮ್ಯಾಚ್ ಫಿಕ್ಸಿಂಗ್ ಮಾಡಿದಂತೆ ಕಾಣಿಸುತ್ತಿದೆ’ ಎಂದರು.
ಬಿಜೆಪಿಯವರು ಕಂಡಕಂಡಲ್ಲಿ ದನದ ಮಾಂಸ ಪತ್ತೆ ಹಚ್ಚುವುದರಲ್ಲಿ ನಿಪುಣರೇ ವಿನಃ ಆರ್ಡಿಎಕ್ಸ್ ಎಲ್ಲಿದೆ ಎಂಬುದು ಹುಡುಕುವುದು ಅವರಿಗೆ ಗೊತ್ತೇ ಇಲ್ಲ ಎಂದು ಅವರು ಕುಟುಕಿದರು.