ಪುರಿ: ಕಾನೂನು ತೊಡಕುಗಳಿಂದ ಇಲ್ಲಿನ ಜಗನ್ನಾಥ ದೇವಾಲಯಕ್ಕೆ ಇನ್ನು ಮುಂದೆ ‘ಕಸ್ತೂರಿ’ ಪೂರೈಕೆ ಸಾಧ್ಯವಿಲ್ಲ ಎಂದು ನೇಪಾಳದ ಕೊನೆಯ ದೊರೆ ಜ್ಞಾನೇಂದ್ರ ಬಿರ್ ಬಿಕ್ರಮ್ ಶಾ ದೇವ್ ತಿಳಿಸಿದ್ದಾರೆ.
ಜಿಂಕೆ ಪ್ರಭೇದಕ್ಕೆ ಸೇರಿದ ಗಂಡು ಕಸ್ತೂರಿ ಮೃಗದಿಂದ ‘ಕಸ್ತೂರಿ’ ಸುಗಂಧದ್ರವ್ಯದ ಸಾರವನ್ನು ತೆಗೆಯಲಾಗುತ್ತದೆ. ಈ ದ್ರವ್ಯಕ್ಕಾಗಿ ಈ ಪ್ರಾಣಿಗಳ ಹತ್ಯೆ ಹೆಚ್ಚಿ ಈಗ ಅಳಿವಿನ ಅಂಚಿನಲ್ಲಿ ಇವೆ.
ಪುರಿಯಲ್ಲಿ ನಡೆದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ಪಟ್ಟಾಭಿಷೇಕದ ಬೆಳ್ಳಿ ಮಹೋತ್ಸವದಲ್ಲಿ ಭಾಗವಹಿಸಿದ್ದ ಅವರು ‘ಅಳಿವಿನ ಅಂಚಿನಲ್ಲಿ ಇರುವ ಈ ಪ್ರಾಣಿಯಿಂದ ಇನ್ನು ಕಸ್ತೂರಿ ಸಂಗ್ರಹಿಸುವುದು ಕಾನೂನು ಬಾಹಿರ’ ಎಂದಿದ್ದಾರೆ.
12ನೇ ಶತಮಾನದಿಂದ ಜಗನ್ನಾಥ ದೇವಾಲಯದ ದೇವರ ವಿಗ್ರಹಗಳಿಗೆ ಕಸ್ತೂರಿಯನ್ನು ಹಚ್ಚುವ ಆಚರಣೆ ಇತ್ತು. ಈ ಕಸ್ತೂರಿಯನ್ನು ದೇವಾಲಯಕ್ಕೆ ಪೂರೈಸುವ ವಿಶೇಷ ಸೇವೆಯನ್ನು ನೇಪಾಳದ ರಾಜಮನೆತನ ನಡೆಸಿಕೊಡುತ್ತಿತ್ತು.