ನವದೆಹಲಿ: ಹಿರಿಯ ಅಧಿಕಾರಿಯೊಬ್ಬರಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದಾಗಿ ಗಗನಸಖಿಯೊಬ್ಬರು ನೀಡಿರುವ ದೂರಿನ ತನಿಖೆಯನ್ನು ಇದೇ ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಏರ್ ಇಂಡಿಯಾಗೆ ಸಚಿವೆ ಮೇನಕಾ ಗಾಂಧಿ ನಿರ್ದೇಶಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರನ್ನು ಸಂತ್ರಸ್ತ ಮಹಿಳೆಯು ಸೋಮವಾರ ಭೇಟಿ ಮಾಡಿದ್ದರು. ಈ ವಿಷಯವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರ ಗಮನಕ್ಕೂ ಮೇನಕಾ ತಂದಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಏರ್ ಇಂಡಿಯಾದ ಆಂತರಿಕ ದೂರು ಸಮಿತಿ ಮುಖ್ಯಸ್ಥರ ಜೊತೆ ಸಚಿವರು ಮಾತನಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿರುವ ಗಗನಸಖಿ, ತಟಸ್ಥ ತನಿಖಾ ಸಮಿತಿಯೊಂದನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಪ್ರಭು, ಏರ್ ಇಂಡಿಯಾದ ಉನ್ನತ ಅಧಿಕಾರಿಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಆರು ವರ್ಷಗಳಿಂದ ಹಿರಿಯ ಅಧಿಕಾರಿಯಿಂದ ಕಿರುಕುಳ ಆಗುತ್ತಿದೆ ಎಂದು ಸೆಪ್ಟೆಂಬರ್ ತಿಂಗಳಿನಲ್ಲೇ ಸಂಸ್ಥೆಗೆ ದೂರು ನೀಡಿದ್ದರೂ ಪ್ರಯೋಜನ ವಾಗಿಲ್ಲ ಎಂದು ಗಗನಸಖಿ ದೂರಿದ್ದಾರೆ.