ಬೆಂಗಳೂರು: ‘ಮಂತ್ರಿಗಳು, ಕೇಂದ್ರ ಸಚಿವರು ಇರದ ಕ್ಷೇತ್ರಗಳ ಸದಸ್ಯರನ್ನು ಮೇಯರ್ ಹುದ್ದೆಗೆ ಆಯ್ಕೆ ಮಾಡುವ ಉದ್ದೇಶ ಪಕ್ಷದ್ದಾಗಿತ್ತು’ ಎಂದುಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
‘ಎರಡು ಬಾರಿ ಪಾಲಿಕೆ ಸದಸ್ಯರಾಗಿರುವ ಗೌತಮ್ಕುಮಾರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸದಿಂದ ಅವರನ್ನು ಮೇಯರ್ ಮಾಡಲಾಗಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗೌತಮ್ ಆಯ್ಕೆಗೆ ಮಾನದಂಡವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯಿಂದ ಬೆಂಗಳೂರು ಕೇಂದ್ರ ಭಾಗದವರು ಈವರೆಗೆ ಮೇಯರ್ ಆಗಿರಲಿಲ್ಲ. ಈ ಭಾಗಕ್ಕೆ ಅವಕಾಶ ನೀಡುವ ಉದ್ದೇಶವೂ ಇತ್ತು’ ಎಂದರು.
‘ದಿಲ್ಲಿಯಿಂದ ಗಲ್ಲಿಯವರೆಗೂ ಬಿಜೆಪಿ’
‘ದೇಶ, ರಾಜ್ಯ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಆಡಳಿತ ಇರಬೇಕು ಎಂಬ ಬಯಕೆ ಇತ್ತು. ಅದು ಈಗ ಈಡೇರಿದೆ. ದೆಹಲಿಯಿಂದ ಗಲ್ಲಿಯವರೆಗೂ ಬಿಜೆಪಿ ಬಾವುಟ ಹಾರುತ್ತಿದೆ’ ಎಂದು ಕಂದಾಯ ಸಚಿವ, ಚುನಾವಣೆಗೆ ಪಕ್ಷದಿಂದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ ಆರ್. ಅಶೋಕ ಹೇಳಿದರು.
‘ಪಕ್ಷ ಸೂಚಿಸಿದ ಅಭ್ಯರ್ಥಿಗಳೇ ಮೇಯರ್, ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉಳಿದವರು ಚಕಾರವಿಲ್ಲದೆ ನಾಮಪತ್ರ ಹಿಂಪಡೆದಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಗೊಂದಲ, ಮನಸ್ತಾಪವಿರಲಿಲ್ಲ. ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನಾವೆಲ್ಲ ಸೇರಿ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೆವು. ನಿರೀಕ್ಷೆಯಂತೆ ಜಯ ಸಿಕ್ಕಿದೆ’ ಎಂದು ಅವರು ಹೇಳಿದರು.
‘ಸ್ಥಾಯಿ ಸಮಿತಿಗಳಲ್ಲಿ ಆದ್ಯತೆ’
‘ಪಾಲಿಕೆಯಲ್ಲಿ ಪಕ್ಷದ 62 ಮಹಿಳಾ ಸದಸ್ಯರಿದ್ದಾರೆ. ಅವರಿಗೆ ಸ್ಥಾಯಿ ಸಮಿತಿಗಳಲ್ಲಿ ಸ್ಥಾನ ಕಲ್ಪಿಸಲಾಗುವುದು’ ಎಂದು ಆರ್.ಅಶೋಕ ಹೇಳಿದರು.
‘ಕಳೆದ ಬಾರಿ ಮಹಿಳೆಯನ್ನೇ ಮೇಯರ್ ಅಭ್ಯರ್ಥಿ ಮಾಡಿದ್ದೆವು. ಆದರೆ, ಅಧಿಕಾರ ಸಿಗಲಿಲ್ಲ. ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲು ಇದ್ದುದರಿಂದ ಪುರುಷರಿಗೆ ನೀಡಲಾಗಿದೆ. ಮಹಿಳಾ ಸದಸ್ಯರು ಸ್ಥಾಯಿ ಸಮಿತಿಗಳಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ’ ಎಂದರು.
*ಸಂಚಾರ ದಟ್ಟಣೆ ಮತ್ತು ಕಸ ಸಮಸ್ಯೆ ನಿರ್ಮೂಲನೆಗೆ ಆದ್ಯತೆ ನೀಡಲಾಗುವುದು. ಹತ್ತು ತಿಂಗಳು ಮಾತ್ರವಲ್ಲದೆ, ಚುನಾವಣೆ ನಂತರವೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ
–ಅರವಿಂದ ಲಿಂಬಾವಳಿ,ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.