ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರಿನಲ್ಲಿ ದಾಸ್ತಾನಿರುವ 2.72 ಲಕ್ಷ ಟನ್ ಅಕ್ರಮ ಅದಿರು ವಿಲೇವಾರಿಗೆ ಎರಡು ಬಾರಿ ಇ–ಹರಾಜು ನಡೆದರೂ ಸೂಕ್ತ ಸ್ಪಂದನೆ ಸಿಗದಾಗಿದೆ. ಅರಣ್ಯ ಇಲಾಖೆಗೂ ಭಾರೀ ತಲೆನೋವಾಗಿದೆ.
ಅಕ್ರಮ ಅದಿರಿನ ಮಾಲೀಕತ್ವದ ವಿಚಾರದಲ್ಲಿ ಈಚೆಗೆ ಗೊಂದಲಗಳು ಎದುರಾಗಿರುವುದರಿಂದ ಹರಾಜು ಪ್ರಕ್ರಿಯೆ ಇನ್ನಷ್ಟು ಗೋಜಲಾಗಿದೆ.
ಅರಣ್ಯ ಇಲಾಖೆ 8 ಲಕ್ಷ ಟನ್ ಕಬ್ಬಿಣದ ಅದಿರು ವಶಪಡಿಸಿಕೊಂಡ ಬಳಿಕ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರ ತನಿಖೆ ಗಮನ ಸೆಳೆದಿತ್ತು. ಈ ಅದಿರಿನಲ್ಲಿ ಸ್ವಲ್ಪ ಭಾಗವನ್ನು ಲೂಟಿ ಮಾಡಲಾಗಿದೆ. ಅದಕ್ಕಾಗಿ ಸಿಬಿಐ ತನಿಖೆ ನಡೆಸಲಾಯಿತು. ಬಳಿಕ ಅರಣ್ಯ ಇಲಾಖೆಯೇ 56 ರಾಶಿಗಳಲ್ಲಿರುವ 2.72 ಲಕ್ಷ ಟನ್ ಅದಿರನ್ನು ಕಾವಲು ಕಾಯುತ್ತಿದೆ.
ಅದಿರಿನ ಕಾವಲಿಗಾಗಿಯೇ ಈವರೆಗೆ ಸುಮಾರು ₹ 20 ಲಕ್ಷ ವೆಚ್ಚ ಮಾಡಿದೆ. ಮಾರಾಟಕ್ಕೆ ಅನುಮತಿ ನೀಡುವಂತೆ ಕೋರಿ 2015ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಶೇಷ ಸಿಬಿಐ ನ್ಯಾಯಾಧೀಶರು ಮೇಲ್ವಿಚಾರಣಾ ಸಮಿತಿಯೊಂದರ ಕಣ್ಗಾವಲಿನಲ್ಲಿ ಇ–ಟೆಂಡರ್ಗೆ ಅನುಮತಿ ನೀಡಿದ್ದರು.
‘ಎರಡು ಬಾರಿ ಇ–ಟೆಂಡರ್ ಕರೆದಿದ್ದೇವೆ. ಆದರೆ, ಸೂಕ್ತ ಸ್ಪಂದನೆ ದೊರೆತಿಲ್ಲ. ಉಕ್ಕಿನ ಕಾರ್ಖಾನೆ ಇರುವ ದೂರದಬಳ್ಳಾರಿಗೆ ಮತ್ತೆ ಅದಿರು ಸಾಗಿಸಿದರೆ ಲಾಭ ಸಿಗದು ಎಂಬ ಕಾರಣಕ್ಕೆ ಖರೀದಿಗೆ ಆಸಕ್ತಿ ತೋರಿಸದಿರಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.