ಸಿರುಗುಪ್ಪ: ತಾಲ್ಲೂಕಿನ ಹಲವೆಡೆ ಸೋಮವಾರ ಸಂಜೆ ಬಿರುಗಾಳಿ ಸಹಿತ ಸುರಿದ ಮಳೆಗೆ ಭತ್ತದ ಬೆಳೆ ನಷ್ಟವಾಗಿದೆ. ತಾಲ್ಲೂಕಿನ ರಾವಿಹಾಳ್, ಹಚ್ಚೋಳ್ಳಿ, ತೆಕ್ಕಲಕೋಟೆ, ಹಳೆಕೋಟೆ, ಮಾಳಪುರ,ನಡವಿ, ಉಡೇಗೋಳ, ಹೆರಕಲ್ಲ ಗ್ರಾಮದಲ್ಲಿ ಮಳೆಸುರಿದು ಕಟಾವಿಗೆ ಬಂದ ಭತ್ತ ನೆಲಕಚ್ಚಿದೆ.
ತಾಲ್ಲೂಕಿನ ತೆಕ್ಕಲಕೋಟೆಯಲ್ಲಿ 20.2ಮಿ.ಮೀ., ಹಚ್ಚೋಳಿಯಲ್ಲಿ -6.2 ಮಿಮೀ, ರಾವಿಹಾಳ್ ಗ್ರಾಮದಲ್ಲಿ 35.2 ಮಿಮೀ ಮಳೆಯಾಗಿದೆ.
ಕೆಲವು ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಉರುಳಿದ್ದು, ತೆಕ್ಕಲಕೋಟೆ ಉಪವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಸರಿಪಡಿಸಿದ್ದಾರೆ.
ಮಳೆ ಬಿದ್ದ ಪ್ರದೇಶಗಳಿಗೆ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಜಂಟಿ ಕೃಷಿ ನಿರ್ದೇಶಕ ಕೆ. ಮಲ್ಲಿಕಾರ್ಜುನ್, ಉಪ ಕೃಷಿ ನಿರ್ದೇಶಕ ಸಿ.ಆರ್. ಚಂದ್ರಶೇಖರ್, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್, ಕೃಷಿ ಸಹಾಯಕ ಅಧಿಕಾರಿಗಳಾದ ಗರ್ಜೆಪ್ಪ, ಸೌಮ್ಯ ಭೇಟಿ ನೀಡಿದ್ದರು.