ನೆಲಮಂಗಲ: ಬಿಜೆಪಿ ಮುಖಂಡರಾದ ರಂಗಧಾಮಯ್ಯ ಅವರ ಐಶಾರಾಮಿ ಮನೆ ಸೋಮವಾರ ಬೆಂಕಿಗಾಹುತಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲಲಿಲ್ಲವಾದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ತಾಲ್ಲೂಕಿನ ಮಲ್ಲರಬಾಣವಾಡಿಯಲ್ಲಿರುವ ಮನೆಯ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಬೆಂಕಿ ಹೊತ್ತಿಕೊಂಡಿರುವುದನ್ನು ಮನೆಕೆಲಸದವರು ನಂದಿಸಲು ಪ್ರಾರಂಭಿಸುತ್ತಿದ್ದಂತೆ ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಗೆ ಸಂಪೂರ್ಣ ಮನೆಯನ್ನು ಆವರಿಸಿಕೊಂಡಿತು. ಲಕ್ಷಾಂತರ ರೂಪಾಯಿ ಬೆಲೆಬಾಳುವ ಪೀಠೋಪಕರಣ, ಮನೆಯ ಪರಿಕರಗಳು ಸುಟ್ಟು ಹೋಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಮನೆಯ ಲಾಕರ್ನಲ್ಲಿದ್ದ ಚಿನ್ನಾಭರಣ, ದಾಖಲೆಗಳು ಸುರಕ್ಷಿತವಾಗಿವೆ. ಘಟನೆಯ ಸುದ್ದಿ ಜನರಿಗೆ ತಿಳಿಯುತ್ತಿದ್ದಂತೆ ನೂರಾರು ಜನ ಮನೆಯತ್ತ ಧಾವಿಸಿದ್ದರು. ಗ್ರಾಮಾಂತರ ಠಾಣೆಯ ಪೊಲೀಸರು ನೆರೆದಿದ್ದ ಜನರನ್ನು ಚದುರಿಸಿದರು.