ಬೆಂಗಳೂರು: ಯೋಜನೇತರ ವೆಚ್ಚಗಳನ್ನು ಕಡಿಮೆ ಮಾಡಲು ವರದಿಯೊಂದನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.
ಈ ವರದಿಯಿಂದ ರಾಜ್ಯ ಸರ್ಕಾರಕ್ಕೆ ಬಜೆಟ್ ತಯಾರಿಸಲು ಅನುಕೂಲವಾಗುತ್ತದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಅಲ್ಲದೆ, ನೀತಿ ಆಯೋಗ ನೀಡಿರುವ ನಿರ್ದೇಶನವನ್ನು ಎಲ್ಲ ಇಲಾಖೆಗಳಲ್ಲಿ ಜಾರಿ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಸೂಚಿಸಲಾಗಿದೆಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ₹200 ಕೋಟಿ ಖರ್ಚು ಮಾಡಿ ಸಿದ್ಧಪಡಿಸಿದ ಹಿಂದುಳಿದ ವರ್ಗಗಳ ಕುರಿತ ಸಾಮಾಜಿಕ ಅಧ್ಯಯನ ವರದಿ ಕಸದ ಬುಟ್ಟಿಗೆ ಸೇರಿದೆ, ತಮ್ಮನ್ನು ತಾವು ದೇವರಾಜ ಅರಸು ಅವರ ಜತೆ ಹೋಲಿಸಿಕೊಳ್ಳುವ ಸಿದ್ದರಾಮಯ್ಯ ಅವರು ಆ ವರದಿ ಅನುಷ್ಠಾನ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಆಯೋಗದ ಅಧ್ಯಕ್ಷರಿಗೆ ತಿಂಗಳಿಗೆ ₹ 2ಲಕ್ಷ ಮತ್ತು ಸದಸ್ಯರಿಗೆ ₹ 1 ಲಕ್ಷ ವೇತನವನ್ನು ನೀಡಲಾಯಿತು. ಆದರೆ ವರದಿಯಿಂದ ಆದ ಪ್ರಯೋಜನವೇನು? ನಾನು ಸಹಕಾರ ಇಲಾಖೆ ಸಚಿವನಾಗಿದ್ದಾಗ ಆ ಇಲಾಖೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೆ ತಂದಿದ್ದೆ. ಹಿಂದುಳಿದವರ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಹಿಂದುಳಿದವರಿಗಾಗಿ ಏನು ಮಾಡಿದ್ದಾರೆ ಎಂದು ಪುಟ್ಟಸ್ವಾಮಿ ಪ್ರಶ್ನಿಸಿದರು.