ಬೆಂಗಳೂರು: ‘ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ 20ರಿಂದ 22 ಅಭ್ಯರ್ಥಿಗಳ ಪಟ್ಟಿಯನ್ನು ಇದೇ 16ರಂದು ಪ್ರಕಟಿಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
‘ಪಕ್ಷದ ಪ್ರಮುಖರ ಸಭೆ ಇದೇ 15ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. 16ರಂದು ವರಿಷ್ಠರ ಜತೆ ದೆಹಲಿಯಲ್ಲಿ ಚರ್ಚೆ ನಡೆಯಲಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಹಾಲಿ 16 ಸಂಸದರಿಗೆ ಟಿಕೆಟ್ ನೀಡಲಾಗುತ್ತದೆ. ಗುಲ್ಬರ್ಗ ಕ್ಷೇತ್ರದಿಂದ ಡಾ. ಉಮೇಶ ಜಾಧವ್ ಸ್ಪರ್ಧೆ ಮಾಡಲಿದ್ದಾರೆ. ಅವರು ಈ ಬಗ್ಗೆ ಕಾನೂನು ಸಲಹೆ ಪಡೆದಿದ್ದು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ’ ಎಂದರು.
‘ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಸ್ಪರ್ಧೆ ಬಹುತೇಕ ಖಚಿತ. ಕೇಂದ್ರ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಬಳ್ಳಾರಿ, ರಾಯಚೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ತಲಾಶೆಯಲ್ಲಿದ್ದೇವೆ’ ಎಂದು ಹೇಳಿದರು.
ಸುಮಲತಾಗೆ ಬಿಜೆಪಿ ಬೆಂಬಲ: ‘ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಕುರಿತು 2 ದಿನಗಳಲ್ಲಿ ನಿಲುವು ಪ್ರಕಟಿಸು ವುದಾಗಿ ಸುಮಲತಾ ಅಂಬರೀಷ್ ತಿಳಿಸಿದ್ದಾರೆ. ಅವರು ತಿಳಿಸುವ ತನಕ ಕಾದು ನೋಡುತ್ತೇವೆ. ಬಳಿಕ ಕೇಂದ್ರ ನಾಯಕರೊಂದಿಗೆ ಸಮಾಲೋಚಿಸಿ ತೀರ್ಮಾನ ಪ್ರಕಟಿಸುತ್ತೇವೆ’ ಎಂದರು.
ಇನ್ನೆರಡು ದಿನ ಕಾದು ನೋಡಿ. ಇನ್ನಷ್ಟು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. -ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
***
ಗೌಡರ ಕಣ್ಣೀರು
‘ಕುಟುಂಬ ರಾಜಕಾರಣ’ದ ಆಪಾದನೆ ಮಾಡಲಾಗುತ್ತಿದೆ ಎಂದು ದೇವೇಗೌಡರ ಕುಟುಂಬದವರು ಸಾಮೂಹಿ ಕವಾಗಿ ಕಣ್ಣೀರು ಹಾಕಿದ ಪ್ರಸಂಗ ಹಾಸನದಲ್ಲಿ ನಡೆದಿದೆ.
ದೇವೇಗೌಡ, ರೇವಣ್ಣ ಹಾಗೂ ಪ್ರಜ್ವಲ್ ಜತೆಗೆ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಒಂದೇ ವೇದಿಕೆಯಲ್ಲಿ ಕಣ್ಣೀರು ಸುರಿಸಿದರು. ‘ಕಣ್ಣೀರು ಹಾಕುವ ಕಲೆ ಗೌಡರ ಕುಟುಂಬಕ್ಕೆ ಕರಗತವಾಗಿದೆ’ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.