ಬೆಂಗಳೂರು: ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಲೋಕೇಶ್ ಮೇಲೆ ಗುರುವಾರ ರಾತ್ರಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
‘ಲಕ್ಷ್ಮಿಪುರ ನಿವಾಸಿಯಾಗಿರುವ ಲೋಕೇಶ್, ಶಾಸಕ ಎಸ್. ರಘು ಆಪ್ತ. ಘಟನೆಯಿಂದ ತೀವ್ರ ಗಾಯಗೊಂಡಿರುವ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಇಂದಿರಾನಗರ ಪೊಲೀಸರು ಹೇಳಿದರು.
‘ರಾತ್ರಿ 10.30ರ ಸುಮಾರಿಗೆ ಮನೆಗೆ ಬಂದಿದ್ದ ಲೋಕೇಶ್ ಕಾರಿನಿಂದ ಕೆಳಗೆ ಇಳಿಯುತ್ತಿದ್ದರು. ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿಗಳು ಚಾಕುವಿನಿಂದ ಬೆನ್ನು ಹಾಗೂ ಪಕ್ಕೆಲುಬಿಗೆ ಇರಿದಿದ್ದರು. ರಕ್ಷಣೆಗೆ ಹೋದ ಸಹೋದರ ಹರೀಶ್ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.