ಬೆಂಗಳೂರು: ಬಿಜೆಪಿ ಕಚೇರಿಯ ಆಂತರಿಕ ಬದಲಾವಣೆಗಳು ರಾಜಕೀಯ ಸ್ವರೂಪ ಪಡೆದಿರುವ ಬೆನ್ನಲ್ಲೇ, ಈಗಅದಕ್ಕೆ ಜಾತಿ ಬಣ್ಣ ಬಳಿಯುವ ಪ್ರಯತ್ನ ನಡೆದಿರುವುದು ಪಕ್ಷದ ವರಿಷ್ಠರನ್ನು ಚಿಂತೆಗೀಡು ಮಾಡಿದೆ.
ಕೆಲವು ದಿನಗಳ ಹಿಂದೆ ಬಿಜೆಪಿ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಅವರಲ್ಲಿ ಒಬ್ಬರು ತಾನು ಲಿಂಗಾಯತ ಎಂಬ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಲಾಗಿದೆ. ಇದಕ್ಕೆ ಕಾರಣ ಯಾರು ಎಂಬುದು ಗೊತ್ತು ಎಂದು ಹೇಳಿರುವುದು ಬಿಜೆಪಿಗೆ ಮುಜುಗರ ಉಂಟು ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ನ ಶಾಸಕ ಎಂ.ಬಿ.ಪಾಟೀಲ ಅವರು, ‘ಬಿಜೆಪಿ ಕಚೇರಿಗೆ ಲಿಂಗಾಯತ ಸಮುದಾಯದ ಕಾರ್ಯಕರ್ತರು ಬರಬೇಡಿ ಎಂದು ಹೇಳಿರುವುದು ದುರದೃಷ್ಟಕರ. ಬಿಜೆಪಿ ನಾಯಕರು ಆ ರೀತಿ ನಡೆದುಕೊಂಡಿದ್ದರೆ ಅಕ್ಷಮ್ಯ’ ಎಂದು ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ತಕ್ಷಣವೇ ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ಕಚೇರಿ ಸಿಬ್ಬಂದಿಯನ್ನು ತೆಗೆದು ಹಾಕುವ ಕೆಲಸದಲ್ಲಿ ತೊಡಗಿದ್ದಾರೆ. ಇದು ಪಕ್ಷದ ವಲಯದಲ್ಲೂ ಟೀಕೆಗೆ ಗುರಿಯಾಗಿದೆ.