ಹೆಸರಘಟ್ಟ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಅವರು ಜೆಡಿಎಸ್ ಪಕ್ಷದ ಮುಖಂಡರ ಜತೆ ಹೆಸರಘಟ್ಟ, ಶಾನುಭೋಗನಹಳ್ಳಿ, ಗೋಪಾಲಪುರ, ವಡೇರಹಳ್ಳಿಯಲ್ಲಿ ಮತಯಾಚನೆ ಮಾಡಿದರು.
ಬಳಿಕ ಮಾತನಾಡಿದ ಅವರು ‘ಹೆಸರಘಟ್ಟ ಗ್ರಾಮದಲ್ಲಿ ₹ 23 ಕೋಟಿ ವೆಚ್ಚದಲ್ಲಿ ಒಳಚರಂಡಿ ಯೋಜನೆಯನ್ನು ಕಾರ್ಯಗತ ಮಾಡಲಾಗಿದೆ. ತ್ಯಾಜ್ಯನೀರಿನ ಶುದ್ಧೀಕರಣಕ್ಕೆ ₹ 7.25 ಕೋಟಿ ವಿನಿಯೋಗಿಸಲಾಗಿದೆ. ಎತ್ತಿನಹೊಳೆ ಯೋಜನೆಯಿಂದ ಈ ಭಾಗದ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ’ ಎಂದರು.
‘ಬಿಜೆಪಿ ಪಿಕ್ ಪ್ಯಾಕೆಟ್ ಪಕ್ಷ. ಅದು ಸುದ್ದಿ ಮಾಧ್ಯಮಗಳನ್ನು ಕೊಂಡುಕೊಂಡು, ಬಣ್ಣದ ಮಾತುಗಳ ಮೂಲಕ ಮತದಾರರನ್ನು ವಂಚಿಸುತ್ತಿದೆ’ ಎಂದು ಜೆಡಿಎಸ್ ಮುಖಂಡ ಇ.ಕೃಷ್ಣಪ್ಪ ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ‘ಚಿಕ್ಕಬಳ್ಳಾಪುರವು ದೊಡ್ಡ ಲೋಕಸಭಾ ಕ್ಷೇತ್ರ. ಆದರೂ ವೀರಪ್ಪ ಮೊಯಿಲಿ ಅವರು ಒಂದೊಂದು ಗ್ರಾಮ ಪಂಚಾಯಿತಿಗೂ ₹ 1 ಕೋಟಿಯಷ್ಟು ಅನುದಾನವನ್ನು ತಂದು ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್,‘ರಾಜಾನುಕುಂಟೆ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಇರುವ ಮೇಲ್ಸೇತುವೆಯ ನಿರ್ಮಾಣಕ್ಕೆ, ಹೆಸರಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸಿ ನೀರಿನ ಪೂರೈಕೆಗೆ ₹ 8 ಲಕ್ಷ ಅನುದಾನ ನೀಡಿದ್ದರು’ ಎಂದು ಅವರು ಹೇಳಿದರು.