ಬೆಂಗಳೂರು: ‘ನಮ್ಮ ಮೆಟ್ರೊ’ದ ನೇರಳೆ ಮಾರ್ಗದಲ್ಲಿನ ಸ್ವಾಮಿ ವಿವೇಕಾನಂದ ನಿಲ್ದಾಣದಲ್ಲಿ ಶನಿವಾರ ಸಂಜೆ ಮೆಟ್ರೊ ರೈಲಿನ ಬೋಗಿಯ ಬ್ಯಾಟರಿ ಮತ್ತು ಎಲ್ಟಿಇಬಿ ಬಾಕ್ಸ್ನಲ್ಲಿ ಹೊಗೆ ಕಾಣಿಸಿಕೊಂಡಿತು. ಇದರಿಂದ ಪ್ರಯಾಣಿಕರು ಆತಂಕಕ್ಕೆ ಈಡಾಗಬೇಕಾಯಿತು.
ಹೊಗೆ ಕಾಣಿಸಿಕೊಂಡ ತಕ್ಷಣ, ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರನ್ನು ರೈಲಿನಿಂದ ಇಳಿಸಿ, ಬೇರೆ ರೈಲಿನಲ್ಲಿ ಕಳುಹಿಸಲಾಯಿತು.
‘ಈ ಮೊದಲು ತಾಂತ್ರಿಕ ದೋಷದ ಕಾರಣ ಹಲವು ಬಾರಿ ಮೆಟ್ರೊ ಸಂಚಾರದಲ್ಲಿ ವ್ಯತ್ಯಯವಾಗಿದೆ. ಎರಡು–ಮೂರು ತಾಸು ರೈಲು ನಿಲ್ಲುತ್ತಿತ್ತು. ಆದರೆ, ಈಗ ರೈಲಿನ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದು ಆತಂಕ ಹುಟ್ಟಿಸಿದೆ’ ಎಂದು ಪ್ರಯಾಣಿಕ ವಿಜಯ್ ಕುಮಾರ್ ಹೇಳಿದರು.
‘ಯಾವ ಕಾರಣದಿಂದ ಹೊಗೆ ಕಾಣಿಸಿಕೊಂಡಿತು ಎಂಬ ಬಗ್ಗೆ ಸಿಬ್ಬಂದಿ ಬಳಿ ಮಾಹಿತಿ ಇಲ್ಲ. ಸಂಚಾರದಲ್ಲಿ ವ್ಯತ್ಯಯವಾಯಿತು. ಇದಕ್ಕೂ ನಿಗಮದವರು ಯಾವುದೇ ಸ್ಪಷ್ಟನೆ ನೀಡಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ರೈಲುಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಇಂತಹ ಅವಘಡ ಸಂಭವಿಸುತ್ತಿದೆ. ರೈಲು ಮತ್ತು ಯಂತ್ರಗಳ ಸಮರ್ಪಕ ನಿರ್ವಹಣೆ ಕಾರ್ಯವನ್ನು ನಿಗಮ ಸಮರ್ಥವಾಗಿ ಮಾಡಬೇಕು’ ಎಂದು ಮೆಟ್ರೊ ರೈಲು ಕಾರ್ಮಿಕ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಹೇಳಿದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಅವರು ಕರೆ ಸ್ವೀಕರಿಸಲಿಲ್ಲ.