ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಬೊಳ್ಳಿನಮ್ಮೆ: ಮುಖ್ಯಮಂತ್ರಿ ಭಾಗಿ ನಿರೀಕ್ಷೆ

Last Updated 6 ಜೂನ್ 2019, 14:15 IST
ಅಕ್ಷರ ಗಾತ್ರ

ಪೊನ್ನಂಪೇಟೆ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಜೂನ್ 8 ಮತ್ತು 9 ರಂದು ನಡೆಯಲಿರುವ ಬೊಳ್ಳಿನಮ್ಮೆ (ಬೆಳ್ಳಿಹಬ್ಬ) ಆಚರಣೆಗೆ ಸಿದ್ದತೆ ಪೂರ್ಣಗೊಂಡಿದ್ದು, ವೇದಿಕೆ, ದ್ವಾರಗಳಲ್ಲಿ ಹಿರಿಯ ಕೊಡವ ಕಲಾಕಾರರಿಗೆ ಗೌರವ ನೀಡಲಾಗಿದೆ.

ಬೊಳ್ಳಿನಮ್ಮೆ ಕಾರ್ಯಕ್ರಮ ನಡೆಯುವ ವೇದಿಕೆಗೆ ಕೊಡಗಿನ ಹಿರಿಯ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಹೆಸರಿಡಲಾಗಿದೆ. ದ್ವಾರಕ್ಕೆ ಕೊಡವ ಭಾಷೆಯಲ್ಲಿ ಕಟ್ಟೊಳೆ ಎಂದು ಕರೆಯುವಂತೆ 2 ಕಟ್ಟೊಳೆಗಳನ್ನು ನಿರ್ಮಿಸಲಾಗಿದೆ. ಪ್ರವೇಶ ದ್ವಾರಕ್ಕೆ ಹಿರಿಯ ಸಂಗೀತಗಾರ ಚೆಕ್ಕೇರ ಅಪ್ಪಯ್ ಅವರ ಹೆಸರನ್ನಿಡಲಾಗಿದೆ. ಪಟ್ಟಣದ ಪೊನ್ನಂಪೆಟೆ ರಸ್ತೆ ಜಂಕ್ಷನ್‍ನಲ್ಲಿ ಹಿರಿಯ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರ ಹೆಸರಿನಲ್ಲಿ ಕಟ್ಟೊಳೆ ಸ್ಥಾಪಿಸಲಾಗಿದೆ.

ಕಾರ್ಯಕ್ರಮಗಳು : ಜೂನ್ 8 ಮತ್ತು 9 ರಂದು ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿರುವ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕೊಡವ ಜಾನಪದ ಸಾಂಸ್ಕೃತಿಕ ಮೆರವಣಿಗೆ, ಸಾಂಸ್ಕೃತಿಕ ಪ್ರದರ್ಶನ, ವಿಚಾರಗೋಷ್ಠಿ, ಕೊಡವ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು 1500 ಆಸನದ ವ್ಯವಸ್ಥೆ ಮಾಡಲಾಗಿದೆ.

ಜೂನ್ 8 ರಂದು ಬೆ. 9 ಗಂಟೆಗೆ ಪಾಲಿಬೆಟ್ಟ ರಸ್ತೆ ಜಂಕ್ಷನ್‍ನಿಂದ ಕೊಡವ ಜಾನಪದ ಸಾಂಸ್ಕೃತಿಕ ಮೆರವಣಿಗೆ ಆರಂಭಗೊಳ್ಳಲಿದೆ. ಮೆರವಣಿಗೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ಪ್ರದರ್ಶನವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪುಸ್ತಕ ಮತ್ತು ವಸ್ತು ಪ್ರದರ್ಶನವನ್ನು ಸಿಇಒ ಕೆ. ಲಕ್ಷ್ಮಿಪ್ರಿಯಾ ಉದ್ಘಾಟಿಸಲಿದ್ದಾರೆ.

ಕೊಡವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಂಡೆಮೇಳ, ಕಾಪಳಕಳಿ, ಉಮ್ಮತ್ತಾಟ್, ಕೋಲಾಟ್, ಪರೆಯಕಳಿ, ದುಡಿಕೊಟ್ಟ್ ಪಾಟ್, ತಾಲಿಪಾಟ್, ಉರ್‍ಟಿಕೊಟ್ಟ್ ಆಟ್, ಕತ್ತಿಯಾಟ್, ಬಾಳೋಪಾಟ್ ನಡೆಯಲಿದೆ.

ಮುಖ್ಯಮಂತ್ರಿ ಆಗಮನ ನಿರೀಕ್ಷೆ : ಬೆ. 10.30 ಕ್ಕೆ ಸಭಾ ಕಾರ್ಯಕ್ರಮ ಉದ್ಘಾಟನೆಯನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೆರವೇರಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೋಯ್ಲಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ಎಂಎಲ್ಸಿ ಸುನಿಲ್ ಸುಬ್ರಮಣಿ, ತಾ.ಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಜ್ಜಿನಿಕಂಡ ಗಣಪತಿ, ಗ್ರಾ. ಪಂ ಅಧ್ಯಕ್ಷೆ ಸೆಲ್ವಿ, ಜಿ. ಪಂ. ಸದಸ್ಯ ಸಿ.ಕೆ. ಬೋಪಣ್ಣ, ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಮುಕ್ಕಾಟೀರ ನಾಣಯ್ಯ, ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಡಾ. ಕಳ್ಳಿಚಂಡ ಲಲಿತಾ ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಯಂಗ ಕಲಾರಂಗದಿಂದ ಕುರ್ಕಂಗ ನಾಟಕ ಪ್ರದರ್ಶನ, ಚೇಂದೀರ ನಿರ್ಮಲಾ ಬೋಪಣ್ಣ ತಂಡದಿಂದ ಕೊಡವ ಆರ್ಕೆಸ್ಟ್ರಾ ನಡೆಯಲಿದೆ.

ಜೂನ್ 9 ರಂದು ಬೆಳಗ್ಗೆ 9 ಕ್ಕೆ ವಿಚಾರಗೋಷ್ಠಿ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ಅಧ್ಯಕ್ಷತೆ ನಡೆಯಲಿದೆ. ಪೆರಿಯಂಡ ಜಯಂತಿ ಅವರಿಂದ ಕೊಡವ ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸುವ ಬಗ್ಗೆ ವಿಚಾರಗೋಷ್ಠಿ, ಕೊಡವ ಭಾಷಿಗರ ನಮ್ಮೆ-ನಾಳ್ ಬಗ್ಗೆ ತೇಲಪಂಡ ಕವನ್ ಕಾರ್ಯಪ್ಪ ವಿಚಾರ ಮಂಡನೆ ಮಾಡಲಿದ್ದಾರೆ.

ಬೆ. 11 ಕ್ಕೆ ನಡೆಯಲಿರುವ ಕೊಡವ ಕವಿಗೋಷ್ಠಿಯಲ್ಲಿ ಸಾಹಿತಿ ಚಾಮೇರ ದಿನೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಚಂಗಚಂಡ ರಶ್ಮಿ ನಿತಿನ್, ಚಮ್ಮಣಮಾಡ ವಾಣಿ ರಾಘವೇಂದ್ರ, ಚಂಗುಲಂಡ ಈಶ, ನಿವ್ಯ ದೇವಯ್ಯ, ಕೋಟೇರ ಉದಯ್, ಅಪ್ಪಚೆಟ್ಟೋಳಂಡ ವನು ವಸಂತ್, ಅಂಜಪರವಂಡ ರಂಜು, ಸುಳ್ಳಿಮಾಡ ಶಿಲ್ಪ, ಕಳ್ಳಿಚಂಡ ದೀನಾ, ರಜಿತ್ ಕಾರ್ಯಪ್ಪ, ಬಟ್ಟಕಾಳಂಡ ಮುತ್ತಣ್ಣ ಕವನ ವಾಚಿಸಲಿದ್ದಾರೆ.

ಮಧ್ಯಾಹ್ನ 2 ಕ್ಕೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಡಾ. ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, ನಾಟಕ ಕ್ಷೇತ್ರದಲ್ಲಿ ಕೋಳೇರ ಸನ್ನು ಕಾವೇರಪ್ಪ, ಜಾನಪದ ಕ್ಷೇತ್ರದಲ್ಲಿ ನಾಳಿಯಮ್ಮಂಡ ಕೆ. ಅಚ್ಚಮಯ್ಯ ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ. ಕೆ. ಶಿವಕುಮಾರ್, ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಶಾಸಕರಾದ, ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ, ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಉಳ್ಳಿಯಡ ಎಂ. ಪೂವಯ್ಯ, ಬಾಚರಣಿಯಂಡ ಪಿ. ಅಪ್ಪಣ್ಣ, ಚಿರಿಯಪಂಡ ರಾಜಾ ನಂಜಪ್ಪ, ಉಳ್ಳಿಯಡ ಡಾಟಿ ಪೂವಯ್ಯ, ಐಮುಡಿಯಂಡ ರಾಣಿ ಮಾಚಯ್ಯ, ಅಡ್ಡಂಡ ಸಿ. ಕಾರ್ಯಪ್ಪ, ಬಿದ್ದಾಟಂಡ ಎಸ್. ತಮ್ಮಯ್ಯ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT