ಬೆಂಗಳೂರು: ಎರಡು ವರ್ಷದ ಮಗುವನ್ನು ಕಾಲಿನಿಂದ ತುಳಿದು ಕೊಲೆ ಮಾಡಿದ್ದ ಅಪರಾಧಿ ಕಸ್ತೂರಿಬಾಯಿ ಅಲಿಯಾಸ್ ಗೀತಾ (32) ಎಂಬಾಕೆಗೆ ನಗರದ 51ನೇ ಸಿಸಿಎಚ್ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
2017ರ ಜ. 9ರಂದು ನಡೆದಿದ್ದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಸುಶೀಲಾ ಅವರು ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ವಾರದ ಮಲಕಪ್ಪ ವಾದಿಸಿದ್ದರು.
ಪ್ರಕರಣದ ವಿವರ: ನೀಲಸಂದ್ರ ಸಮೀಪದ ಮನೇಗೌಡ ಗಾರ್ಡನ್ನ ನಿವಾಸಿಯಾದ ಅಪರಾಧಿಕಸ್ತೂರಿಬಾಯಿ, ಮನೆಯಲ್ಲೇ ಸ್ಕ್ರೀನ್ ಪ್ರಿಂಟಿಂಗ್ ಕೆಲಸ ಮಾಡುತ್ತಿದ್ದಳು. ಆಕೆ ಮನೆಯ ಪಕ್ಕವೇಆರ್ಮುಗಂ ಹಾಗೂ ಅವರ ಪತ್ನಿ ಶಾರದಾ ನೆಲೆಸಿದ್ದರು. ಆ ದಂಪತಿಯ ಮಗು ವಿಜಯ್ನನ್ನೇ ಕಸ್ತೂರಿಬಾಯಿ ಕೊಂದಿದ್ದರು.
ಮಗು ವಿಜಯ್ ಹಾಗೂ ಅದರ ಅಣ್ಣ, ಕಸ್ತೂರಿಬಾಯಿ ಮನೆಗೆ ಹೋಗಿದ್ದರು. ಮಗು, ಅಳಲಾರಂಭಿಸಿತ್ತು. ಹಾಲು ತರಲೆಂದು ಅಣ್ಣ, ಮನೆಗೆ ಹೋಗಿದ್ದ. ಅದೇ ವೇಳೆ ಮಗು, ಟೇಬಲ್ ಮೇಲಿಟ್ಟಿದ್ದಸ್ಕ್ರೀನ್ ಪ್ರಿಂಟಿಂಗ್ ವಸ್ತುಗಳನ್ನು ಕೆಳಗೆ ಬೀಳಿಸಿತ್ತು.
ಅಷ್ಟಕ್ಕೆ ಕೋಪಗೊಂಡಿದ್ದ ಕಸ್ತೂರಿಬಾಯಿ, ಕಡಗೋಲಿನಿಂದ ಮಗುವಿನ ಬೆನ್ನಿಗೆ ಹೊಡೆದಿದ್ದಳು. ಮಗು ಕೆಳಗೆ ಬೀಳುತ್ತಿದ್ದಂತೆ, ಕಾಲಿನಿಂದ ಹಲವು ಬಾರಿ ತುಳಿದು ಕೊಂದಿದ್ದಳು.