ಬೆಂಗಳೂರು: ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ರಾಜ್ಯ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರಿಗೆ ಶುಕ್ರವಾರ ರಾಜ್ಯ ವಕೀಲರ ಪರಿಷತ್ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.
ಹೈಕೋರ್ಟ್ ಹಾಲ್ ಸಂಖ್ಯೆ ಒಂದರಲ್ಲಿ ನಡೆದ ಸಾಂಪ್ರದಾಯಿಕ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯಮೂರ್ತಿ ರವಿ ಮಳಿಮಠ ವಹಿಸಿದ್ದರು.
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಕೆ.ಬಿ.ನಾಯಕ್ ಮಾತನಾಡಿ, ‘ನಾರಾಯಣ ಸ್ವಾಮಿ ಅವರು ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿ 25 ಲಕ್ಷ ಸಸಿಗಳನ್ನು ನೆಡುವ ಕಾರ್ಯ ಹಮ್ಮಿಕೊಳ್ಳುವ ಮೂಲಕ ತಮ್ಮ ಪರಿಸರ ಪ್ರೇಮ ಮೆರೆದಿದ್ದಾರೆ’ ಎಂದರು.
ಎಲ್.ನಾರಾಯಣ ಸ್ವಾಮಿ ಮಾತನಾಡಿ, ‘ಇಷ್ಟು ದಿನಗಳ ಕಾಲ ನನಗೆ ಎಲ್ಲ ವಲಯಗಳಿಂದ ಸಹಕಾರ ದೊರೆತಿದೆ. ಮನೆಯ ವಾತಾವರಣವನ್ನು ಬಿಟ್ಟು ಹೋಗುತ್ತಿದ್ದೇನಲ್ಲಾ ಎಂಬ ಸಂಕಟ ಇದೆ. ಆದರೂ, ನ್ಯಾಯಾಂಗದ ಸೇವೆಯನ್ನು ಪ್ರಾಂಜಲ ಮನಸ್ಸಿನಿಂದ ಮುಂದುವರಿಸುವೆ’ ಎಂದರು.