ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಒತ್ತುವರಿ, ಹಫ್ತಾ ವಸೂಲಿ ಸಹಿಸಲ್ಲ: ನೂತನ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್

ಅಧಿಕಾರ ಸ್ವೀಕಾರ
Last Updated 17 ಜೂನ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 32ನೇ ಪೊಲೀಸ್ ಕಮಿಷನರ್ ಆಗಿ ಅಲೋಕ್‌ಕುಮಾರ್ ಸೋಮವಾರ ಸಂಜೆ ಅಧಿಕಾರ ವಹಿಸಿಕೊಂಡರು.

ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಕಮಿಷನರ್ ಟಿ.ಸುನೀಲ್ ಕುಮಾರ್ ಅವರು ಬ್ಯಾಟನ್ ನೀಡುವ ಮೂಲಕ ಅಲೋಕ್‌ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಅಲೋಕ್‌ಕುಮಾರ್ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

* ಬೆಂಗಳೂರಿನಲ್ಲೇ ಡಿಸಿಪಿಯಾಗಿ, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ನೀವು ಈಗ ಕಮಿಷನರ್ ಆಗಿದ್ದೀರಾ? ಹೊಸ ಜವಾಬ್ದಾರಿಯ ಬಗ್ಗೆ?

ಅಪರಾಧ ವಿಭಾಗದಲ್ಲಿ 9 ತಿಂಗಳಿನಿಂದ ಕೆಲಸ ಮಾಡುತ್ತಿದ್ದೆ. ಈಗ ಹೊಸ ಜವಾಬ್ದಾರಿ ಸಿಕ್ಕಿದೆ. ಸಂತೋಷವಾಗುತ್ತಿದೆ ಎನ್ನುವುದಕ್ಕಿಂತ ಸಾಕಷ್ಟು ಸವಾಲು ಹಾಗೂ ಸಮಸ್ಯೆಗಳು ನನ್ನ ಮುಂದಿವೆ.

* ಅಪರಾಧ ಕ್ಷೇತ್ರದಲ್ಲಿ ನಗರದ ಗಂಭೀರ ಸಮಸ್ಯೆಗಳೇನು? ಅದರ ತಡೆಗೆ ನಿಮ್ಮ ಕ್ರಮವೇನು?

ಸಮಸ್ಯೆಗಳೇನು ಎಂದು ದಿಢೀರನೇ ಹೇಳಲಾಗದು. ಪೊಲೀಸ್ ಇಲಾಖೆಯಲ್ಲಿ ನಿತ್ಯವೂ ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಅವುಗಳನ್ನು ನಿವಾರಿಸುತ್ತಲೇ ಹೋಗಬೇಕು.

* ವೈಟ್‌ ಕಾಲರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಅವುಗಳ ತಡೆಗೆ ಏನು ಮಾಡುತ್ತೀರಿ?

ವೈಟ್‌ ಕಾಲರ್ ಅಪರಾಧ ಪ್ರಕರಣಗಳಿಗೆ ಶಿಕ್ಷೆ ಪ್ರಮಾಣ ಕಡಿಮೆ. ಅದಕ್ಕೆ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಾತ್ಮಕ ಅಡೆತಡೆಗಳೂ ಇವೆ.

* ಆಂಬಿಡೆಂಟ್‌, ಐಎಂಎ ಸೇರಿದಂತೆ ಹಲವು ಕಂಪನಿಗಳುಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿವೆ. ಇಂಥ ಕಂಪನಿಗಳ ನಿಗ್ರಹ ಹೇಗೆ?

ಇಂಥ ಕಂಪನಿಗಳಿಂದ ಇದುವರೆಗೆ 1.25 ಲಕ್ಷ ಮಂದಿ ವಂಚನೆಗೆ ಒಳಗಾಗಿದ್ದಾರೆ. ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ನನಗಿಲ್ಲ. ನೋಂದಣಿ ಮಾಡಿಕೊಟ್ಟ ಇಲಾಖೆಗಳೇ ಕ್ರಮ ಜರುಗಿಸಬೇಕು. ಜನರ ಹಿತದೃಷ್ಟಿಯಿಂದ ಇಂಥ ಕಂಪನಿಗಳಿಂದ ಎಚ್ಚರವಾಗಿರುವಂತೆ ಮಾತ್ರ ನಾನು ಜಾಗೃತಿ ಮೂಡಿಸಬಲ್ಲೆ. ಅಗತ್ಯಬಿದ್ದರೆ, ಕಾನೂನು ತಜ್ಞರ ನೆರವು ಪಡೆದು ಕಂಪನಿಗಳಿಗೆ ಲಗಾಮು ಹಾಕುತ್ತೇನೆ.

* ‘ಐಎಂಎ ಕಂಪನಿ’ ವಂಚನೆ ಪ್ರಕರಣ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಆ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಹೆಚ್ಚು ಪ್ರತಿಕ್ರಿಯಿಸಲಾರೆ. ಆ ಕಂಪನಿಯ ಕಚೇರಿ ಮೇಲೆ ಮೂರು ತಿಂಗಳ ಹಿಂದೆಯೇ ದಾಳಿ ಮಾಡಲಾಗಿತ್ತು. ಕಂಪನಿಯಿಂದ ವಂಚನೆಗೀಡಾದವರು ಇದ್ದರೆ ದೂರು ನೀಡುವಂತೆ ಕೋರಲಾಗಿತ್ತು. ಯಾರೊಬ್ಬರೂ ದೂರು ನೀಡಲಿಲ್ಲ. ಇಂಥ ಪ್ರಕರಣಗಳಲ್ಲಿ ಪೊಲೀಸರಿಗೆ ಜನರ ಸಹಕಾರವೂ ಬೇಕಾಗುತ್ತದೆ.

* ತಕ್ಷಣದ ಸವಾಲುಗಳೇನು?

ನಗರದಲ್ಲಿ ಭೂ ಒತ್ತುವರಿ, ಮೀಟರ್ ಬಡ್ಡಿ ಹಾಗೂ ಹಫ್ತಾ ವಸೂಲಿ ಜಾಸ್ತಿ ಆಗಿದೆ. ಅಂಥ ದಂಧೆಗಳನ್ನು ಬುಡಸಮೇತ ಮಟ್ಟಹಾಕಲು ಸದ್ಯದಲ್ಲೇ ಕಾರ್ಯಾಚರಣೆ ಶುರು ಮಾಡಲಿದ್ದೇನೆ. ಇಂಥ ದಂಧೆ ನಡೆಸುವವರು ಈಗಲೇ ಎಚ್ಚೆತ್ತುಕೊಂಡು ಬದಲಾದರೆ ಒಳ್ಳೆಯದು.

* ಠಾಣೆ ಮಟ್ಟದಲ್ಲಿ ಸುಧಾರಣಾ ತರಲು ಏನು ಮಾಡುವಿರಿ?

ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಮ್ಮದಾಗಬೇಕಾದರೆ, ಠಾಣೆಗಳಿಂದಲೇ ಬದಲಾವಣೆ ಆಗಬೇಕು. ಶಿಫಾರಸು ಮಾಡಿಸಿಕೊಂಡು ಬರುವವರಿಗೆ ಮಾತ್ರ ಸೇವೆ ಎಂಬ ಸ್ಥಿತಿ ಇದೆ. ಬಡವರು ಹಾಗೂ ಸಾಮಾನ್ಯ ಜನಕ್ಕೂ ಸ್ಪಂದಿಸುವ ಕೆಲಸ ಆಗಬೇಕು. ಠಾಣೆಯಲ್ಲೇ ಪರಿಹಾರ ಸಿಗುವಂತಾಗಬೇಕು. ಯಾರೊಬ್ಬರೂ ಸಮಸ್ಯೆ ಹೇಳಿಕೊಂಡು ಕಮಿಷನರ್‌ ಕಚೇರಿಗೆ ಬರುವಂತಾಗಬಾರದು.

* ರೌಡಿಗಳ ವಿರುದ್ಧ ನಿಮ್ಮ ಕಾರ್ಯಾಚರಣೆ ಮುಂದುವರಿಯುತ್ತಾ?

ಖಂಡಿತ. ಸದ್ಯ ಭಯಾನಕ ರೌಡಿಗಳು ಯಾರೂ ಇಲ್ಲ. ಕೆಲವರು ಸಣ್ಣಪುಟ್ಟ ರೌಡಿಗಳಿದ್ದಾರೆ. ಬದಲಾವಣೆಯಾಗಲು ಅವರಿಗೆ ಅವಕಾಶ ಕೊಡುತ್ತೇನೆ. ಆಕಸ್ಮಾತ್ ಬಾಲ ಬಿಚ್ಚಿದರೆ, ಹೇಗೆ ಕತ್ತರಿಸಬೇಕು ಎಂಬುದೂ ನನಗೆ ಗೊತ್ತಿದೆ.ದಕ್ಷಿಣ ವಿಭಾಗದ ಡಿಸಿಪಿ ಆಗಿದ್ದಾಗ ರೌಡಿಗಳ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ಮಾಡಿದ್ದೆ. ಅಂಥ ಪ್ರಯತ್ನ ಇನ್ನು ಮುಂದೆ ನಿರಂತರವಾಗಲಿದೆ.

‘ಸಹೋದ್ಯೋಗಿಗೆ ಅಧಿಕಾರ ಹಸ್ತಾಂತರಿಸಿದ್ದಕ್ಕೆ ಖುಷಿ’

‘ನಮ್ಮ ಜೊತೆಯೇ ಕೆಲಸ ಮಾಡುತ್ತಿದ್ದ ಅಲೋಕ್‌ಕುಮಾರ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಕ್ಕೆ ಖುಷಿಯಾಗುತ್ತಿದೆ. ಅವರಿಗೆ ಮುಂದಿನ ದಿನಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ’ ಎಂದು ಟಿ. ಸುನೀಲ್‌ಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎರಡು ವರ್ಷ ಸಂತೋಷದಿಂದ ಕೆಲಸ ಮಾಡಿದ್ದೇನೆ. ಪೊಲೀಸರಿಗೆ ಸವಾಲಾಗಿದ್ದ ಹಾಗೂ ಪೊಲೀಸರ ಶಕ್ತಿಯನ್ನೇ ಪ್ರಶ್ನಿಸಿದ್ದ ಪ್ರಕರಣಗಳು ನನ್ನ ಅವಧಿಯಲ್ಲಿ ಬಗೆಹರಿದಿವೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ಅವೆಲ್ಲ ಸಾಧ್ಯವಾಯಿತು’ ಎಂದರು.

‘ಎರಡು ಚುನಾವಣೆಗಳು ಹಾಗೂ ಅಂಬರೀಷ್ ಅವರ ಅಂತ್ಯಕ್ರಿಯೆ ವೇಳೆ ಇಡೀ ತಂಡ ಉತ್ತಮವಾಗಿ ಕೆಲಸ ಮಾಡಿತು. ಅದಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಶಂಸೆಯೂ ಸಿಕ್ಕಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT