ಬೆಂಗಳೂರು: ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿರುವ ನಟ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರಿಗಾಗಿ ಗಿರಿನಗರ ಪೊಲೀಸರು ಶೋಧ ನಡೆಸುತ್ತಿರುವ ಬೆನ್ನಲ್ಲೇ, ‘ಪೊಲೀಸ್ ಅಧಿಕಾರಿಗಳು ನಮಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ಆರೋಪಿಸಿ ಅವರ 2ನೇ ಮಗಳು ಮೋನಿಶಾ ಮಕ್ಕಳ ಆಯೋಗದ ಮೆಟ್ಟಿಲೇರಿದ್ದಾಳೆ.
‘ಅಮ್ಮ ಎಲ್ಲಿಗೆ ಹೋಗಿದ್ದಾರೆ ಎಂದು ನಮಗೆ ಗೊತ್ತಿಲ್ಲ. ನಾನು ಹಾಗೂ ಅಕ್ಕ ಮೋನಿಕಾ ಇಬ್ಬರೇ ಮನೆಯಲ್ಲಿದ್ದೇವೆ. ಪೊಲೀಸರು ಪದೇ ಪದೇ ಮನೆಗೆ ಬಂದು ನಮ್ಮನ್ನು ವಿಚಾರಿಸುತ್ತಿದ್ದಾರೆ. ಇದರಿಂದ ನಮಗೆ ಭಯವಾಗುತ್ತಿದೆ. ಅಪ್ಪ–ಅಮ್ಮನ ಜಗಳದ ಬಗ್ಗೆ ನಮ್ಮನ್ನು ಪ್ರಶ್ನೆ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಿ’ ಎಂದು ಮೋನಿಶಾ ಮನವಿ ಮಾಡಿದ್ದಾಳೆ.
ದೂರನ್ನು ಸ್ವೀಕರಿಸಿದ ಬಳಿಕ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರನ್ನು ಸಂಪರ್ಕಿಸಿರುವ ಆಯೋಗದ ಸದಸ್ಯರು, ‘ದೂರಿನಲ್ಲಿ ಮೋನಿಕಾಳ ಹೆಸರಿದ್ದರೆ ಆಕೆಯನ್ನು ಮಾತ್ರ ವಿಚಾರಣೆ ಮಾಡಿ. ಮೋನಿಶಾಳಿಗೆ ತೊಂದರೆ ಕೊಡದೆ ಮಕ್ಕಳ ಹಕ್ಕನ್ನು ಕಾಪಾಡಿ’ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಜಾಮೀನಿಗೆ ಅರ್ಜಿ: ಬಂಧನದ ಭೀತಿ ಎದುರಿಸುತ್ತಿರುವ ನಾಗರತ್ನ, ನಿರೀಕ್ಷಣಾ ಜಾಮೀನು ಕೋರಿ ತಮ್ಮ ವಕೀಲರ ಮೂಲಕ ಸೆಷನ್ಸ್ ನ್ಯಾಯಾಲಯಕ್ಕೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆಯನ್ನು ಅ.5ಕ್ಕೆ ಮುಂದೂಡಲಾಗಿದೆ.