ಬೆಂಗಳೂರು: ‘ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಕೇಂದ್ರ ಸರ್ಕಾರ ಶೇ 10 ರಷ್ಟು ಮೀಸಲಾತಿ ನೀಡಿರುವುದು ಸಂವಿಧಾನ ಬಾಹಿರ ನಡೆಯಾಗಿದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಹೇಳಿದರು.
ದಲಿತ ಸಂಘರ್ಷ ಸಮಿತಿಯು ಮಂಗಳವಾರ ಆಯೋಜಿಸಿದ್ದ ‘ಸಂವಿಧಾನ ಸಂರಕ್ಷಣಾ ಸಮಾವೇಶ–ಗಣರಾಜ್ಯದ ಆಶಯಗಳು’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂವಿಧಾನದ ಪ್ರಕಾರ ಸಾಮಾಜಿಕ ಅಸಮಾನತೆಗೆ ಒಳಗಾದವರು ಮೀಸಲಾತಿಗೆ ಅರ್ಹರು. ಇದನ್ನು ಮರೆಮಾಚಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗಿದೆ. ಇದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವ ವಿಚಾರ. ಇದು ಸಾಮಾಜಿಕ ತತ್ವಕ್ಕೆ ಮಾಡಿದ ಅನ್ಯಾಯ’ ಎಂದು ಬೇಸರಿಸಿದರು.
ಹಿರಿಯ ವಕೀಲ ರವಿವರ್ಮಾಕುಮಾರ್, ‘ಕೇಂದ್ರ ಸರ್ಕಾರ ಕಾಯಿದೆಗಳ ಮೂಲಕ ದೇಶದ ಹೊರಗಿನ ಮುಸ್ಲಿಮರು ಭಾರತೀಯರಾಗುವ ಅವಕಾಶ ನಿರಾಕರಿಸಿದೆ. ಇದು ಭಾರತವನ್ನು ಹಿಂದೂ ರಾಷ್ಟ್ರವಾಗಿಸುವ ಮೊದಲ ಹೆಜ್ಜೆ. ಇಂದು ಶೇ 10ರಷ್ಟು ಮೀಸಲು ಕಲ್ಪಿಸಿದ್ದಾರೆ. ಮುಂದೆ ಶೇ 25ಕ್ಕೆ ಹೆಚ್ಚಿಸಿದರೂ ಅಚ್ಚರಿ ಪಡಬೇಕಿಲ್ಲ’ ಎಂದರು.
‘ಸಂವಿಧಾನವು ಜಾತ್ಯತೀತ ಪರಿಕಲ್ಪನೆಗೆ ಅವಕಾಶ ನೀಡಿದೆ. ಅದಕ್ಕೆ ಕೊಡಲಿ ಪೆಟ್ಟು ನೀಡಲು ಆರ್ಎಸ್ಎಸ್ ಹಾಗೂ ಬಿಜೆಪಿ ಶ್ರಮಿಸುತ್ತಿವೆ’ ಎಂದು ಆರೋಪಿಸಿದರು.