ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯ ಸಂಕೀರ್ಣಕ್ಕೀಗ ನವವಧುವಿನ ಕಳೆ..!

ಧಾರವಾಡ ಜಿಲ್ಲಾ ನ್ಯಾಯಾಲಯದ 1 ಮತ್ತು 2 ನೇ ಮಹಡಿ ಉದ್ಘಾಟನೆ ಇಂದು..
Last Updated 18 ಜನವರಿ 2019, 13:43 IST
ಅಕ್ಷರ ಗಾತ್ರ

ಸಾಂವಿಧಾನಿಕ ಹಕ್ಕುಗಳ ರಕ್ಷಣೆ, ನೊಂದವರಿಗೆ ಪರಿಹಾರ, ವ್ಯಾಜ್ಯಗಳ ವಿಲೇವಾರಿ ಸೇರಿದಂತೆ ಹಲವು ನ್ಯಾಯಿಕ ಹೊಣೆಗಾರಿಕೆಗಳನ್ನು ನಿಭಾಯಿಸುವ ಜವಾಬ್ದಾರಿ ಹೊತ್ತಿರುವ ನ್ಯಾಯಾಂಗ ನಾಡಿನ ನ್ಯಾಯಾಪೇಕ್ಷಿತ ಕಕ್ಷಿದಾರರ ಹಿತ ಕಾಪಾಡುತ್ತ ತನ್ನ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ.

ಈ ನ್ಯಾಯಾಂಗ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು, ವಕೀಲರು ನ್ಯಾಯದಾನ ಪ್ರಕ್ರಿಯೆಯಲ್ಲಿ ಸಹಕರಿಸಲು ಮತ್ತು ಕಕ್ಷಿದಾರರು ಸಮರ್ಪಕ ನ್ಯಾಯ ಪಡೆಯಲು ನ್ಯಾಯಾಲಯಗಳಿಗೆ ಮೂಲ ಸೌಕರ್ಯಗಳು ಅಗತ್ಯ. ಅದನ್ನು ಒದಗಿಸುವುದು ಪ್ರಭುತ್ವದ ಹೊಣೆಗಾರಿಕೆ.

ಈ ನಿಟ್ಟಿನಲ್ಲಿ ಸರ್ಕಾರ ನ್ಯಾಯಾಲಯ ಕಟ್ಟಡಗಳ ನವೀಕರಣ, ಅಗತ್ಯ ಮೂಲ ಸೌಕರ್ಯಗಳು, ಉತ್ತಮ ನ್ಯಾಯಾಲಯ ಕೊಠಡಿಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಇದೀಗ ಧಾರವಾಡದ ಕಲಾಭವನದ ಹಿಂದುಗಡೆ, ಪಿ.ಬಿ ರಸ್ತೆಯ ಪಕ್ಕದಲ್ಲಿರುವ ಜಿಲ್ಲಾ ನ್ಯಾಯಾಲಯದ ಮೊದಲ ಮತ್ತು ಎರಡನೆ ಮಹಡಿ ನಿರ್ಮಾಣಗೊಂಡಿದ್ದು, ಮೊದಲ ಮಹಡಿ ನವೀಕರಣಗೊಂಡು ನ್ಯಾಯದಾನ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಜ್ಜಾಗಿದೆ.

ಈ ಮೊದಲು ಕೆಲವು ನ್ಯಾಯಾಲಯಗಳು ಸಿವಿಲ್‌ ಕೋರ್ಟ್‌ ಆವರಣದಲ್ಲಿ ಮತ್ತು ಇನ್ನು ಕೆಲವು ನ್ಯಾಯಾಲಯಗಳು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಜತೆಗೆ ಸಂಬಂಧಿಸಿದ ವಿಭಾಗಗಳು ಇದ್ದವು. ಹೀಗಾಗಿ ವಕೀಲರು ಮತ್ತು ಕಕ್ಷಿದಾರರ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುವ ಅನಿವಾರ್ಯತೆ ಇತ್ತು. ಆದರೆ ಇದೀಗ ನೂತನವಾಗಿ ನಿರ್ಮಾಣಗೊಂಡಿರುವ ಮೊದಲ ಮತ್ತು ಎರಡನೆ ಮಹಡಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮೊದಲ ಮತ್ತು ಎರಡನೆ ಮಹಡಿಯಲ್ಲಿ ನ್ಯಾಯಾಲಯಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳು ಹಾಗೂ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಈಗಾಗಲೇ ಇರುವ ಬೇಸ್‌ಮೆಂಟ್ ಮಹಡಿ ಮತ್ತು ನೆಲಮಹಡಿಗಳಲ್ಲಿ ವಿವಿಧ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಮೊದಲ ಮಹಡಿಯು 3688.11 ಚ.ಮೀ ಹಾಗೂ ಎರಡನೇ ಮಹಡಿ 3688.11 ಚ.ಮೀ ವಿಸ್ತೀರ್ಣ ಹೊಂದಿದ್ದು, ಬೇಸ್‌ಮೆಂಟ್ ಮಹಡಿ, ನೆಲಮಹಡಿ, ಮೊದಲನೇ ಮಹಡಿ, ಎರಡನೇ ಮಹಡಿ ಸೇರಿದಂತೆ ಒಟ್ಟು 12,958.20 ಚ.ಮೀಗಳ ವಿಸ್ತೀರ್ಣ ಹೊಂದಿ ನ್ಯಾಯಾಲಯ ಸಂಕೀರ್ಣ ಭವ್ಯತೆ ಪಡೆದಿದೆ.

ಪ್ರಸ್ತುತ ನೆಲಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಕೋರ್ಟ್ ಹಾಲ್ ಸೇರಿದಂತೆ ಮೊದಲ ಮಹಡಿಯಲ್ಲಿ ಹೊಸದಾಗಿ 5 ಕೋರ್ಟ್ ಹಾಲ್ ಹಾಗೂ ಎರಡನೇ ಮಹಡಿಯಲ್ಲಿ ಹೊಸದಾಗಿ 5 ಕೋರ್ಟ್ ಹಾಲ್ ಸೇರಿದಂತೆ ಒಟ್ಟು 15 ಕೋರ್ಟ್ ಹಾಲ್‌ಗಳು ಕಾರ್ಯನಿರ್ವಹಿಸಲಿವೆ.

ಶೀಘ್ರ ವ್ಯಾಜ್ಯ ವಿಲೇವಾರಿ ಉದ್ದೇಶದಿಂದ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಕಟ್ಟಡದಲ್ಲಿನ ಎಲ್ಲಾ ಗಣಕಯಂತ್ರಗಳಿಗೆ ಸ್ಥಳೀಯ ಗಣಕಜಾಲ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ಮೊದಲನೇ ಹಾಗೂ ಎರಡನೇ ಮಹಡಿಗಳಲ್ಲಿ ಪ್ರತಿ ಗೌರವಾನ್ವಿತ ನ್ಯಾಯಮೂರ್ತಿಗಳ ಕೊಠಡಿಗಳಿಗೆ ಹೊಂದಿಕೊಂಡಂತೆ ಒಂದು ಆಂಟಿ ಚೇಂಬರ್, ಗ್ರಂಥಾಲಯ ಮತ್ತು ಶೌಚಾಲಯಗಳನ್ನೂ ಸಹ ನಿರ್ಮಿಸಲಾಗಿದೆ.

ಎರಡನೇ ಮಹಡಿಯಲ್ಲಿ ಹಿರಿಯ ಸರ್ಕಾರಿ ಅಭಿಯೋಜಕರಿಗಾಗಿ ಮತ್ತು ಸರ್ಕಾರಿ ಅಭಿಯೋಜಕರಿಗಾಗಿ ಪ್ರತ್ಯೇಕ ಕೊಠಡಿಗಳಿದ್ದು, ಕಟ್ಟಡದ ಪ್ರತಿ ಮಹಡಿಯಲ್ಲಿ ಮಹಿಳೆಯರಿಗಾಗಿ ಎರಡು ಮತ್ತು ಪುರುಷರಿಗಾಗಿ ಎರಡು ಪ್ರತ್ಯೇಕ ಶೌಚಾಲಯಗಳನ್ನೂ ಸಹ ನಿರ್ಮಿಸಲಾಗಿದೆ.

ಕಟ್ಟಡದ ಹಿಂಭಾಗದಲ್ಲಿರುವ ಖುಲ್ಲಾ ಜಾಗೆಯಲ್ಲಿ 250 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದ್ದು, ಕಟ್ಟಡದ ಹಿಂಭಾಗದಲ್ಲಿರುವ ಖುಲ್ಲಾ ಜಾಗೆಯಲ್ಲಿ 125 ಕೆವಿ ಸಾಮರ್ಥ್ಯದ ಜನರೇಟರನ್ನೂ ಸಹ ಅಳವಡಿಸಲಾಗಿದೆ. ಕಟ್ಟಡದಲ್ಲಿನ ಗಣಕ ಯಂತ್ರಗಳಿಗೆ ನಿರಂತರ ವಿದ್ಯುತ್ ಪೂರೈಸುವ ಸಲುವಾಗಿ 10 ಕೆವಿ ಸಾಮರ್ಥ್ಯದ ನಾಲ್ಕು ಸಣ್ಣ ಪ್ರಮಾಣದ ಜನರೇಟರ್ ಅಳವಡಿಸಲಾಗಿದೆ. ಕಟ್ಟಡದ ಒಳ ಮತ್ತು ಹೊರ ಭಾಗದಲ್ಲಿ ಹೆಚ್ಚು ಇಂಧನ ದಕ್ಷತೆ ಇರುವ ಎಲ್.ಇ.ಡಿ ಬಲ್ಬುಗಳನ್ನು ಅಳವಡಿಸಲಾಗಿದೆ.

ಕಟ್ಟಡ ಸಂಕೀರ್ಣದ ಮುಖ್ಯ ಪ್ರವೇಶ ದ್ವಾರದ ಎಡಬದಿಯಲ್ಲಿ ಸಾರ್ವಜನಿಕರಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿಗೆ 15 ಜನರ ಸಾಮರ್ಥ್ಯದ ಎರಡು ಪ್ರತ್ಯೇಕ ಲಿಫ್ಟ್‌ಗಳು ಹಾಗೂ ಹಿಂಭಾಗದಲ್ಲಿ 7 ಜನರ ಸಾಮರ್ಥ್ಯದ ಒಂದು ಲಿಫ್ಟ್‌ನ್ನು ಕೇವಲ ನ್ಯಾಯಮೂರ್ತಿಗಳಿಗಾಗಿ ಮೀಸಲಿರಿಸಲಾಗಿದೆ.

ಹೊಸದಾಗಿ ನಿರ್ಮಿಸಲಾಗಿರುವ ಮೊದಲನೇ ಹಾಗೂ ಎರಡನೇ ಮಹಡಿಗಳಲ್ಲಿ ಪ್ರತಿ ಮಹಡಿಯಲ್ಲಿ ಕೋರ್ಟ್‌ಹಾಲ್‌ಗಳು, ಗೌರವಾನ್ವಿತ ವ್ಯಾಯಮೂರ್ತಿಗಳಿಗಾಗಿ ಪ್ರತ್ಯೇಕ ಕೊಠಡಿಗಳು, ಕಚೇರಿಗಳಿಗಾಗಿ ಕೊಠಡಿಗಳು, ಪ್ರಾಪರ್ಟಿ ರೂಮ್, ನ್ಯಾಯಾಲಯದ ಕಲಾಪಗಳಲ್ಲಿ ಭಾಗಿಯಾಗುವ ಸಾರ್ವಜನಿಕರು ಮತ್ತು ವಕೀಲರಿಗಾಗಿ ಅವಶ್ಯವಿರುವ ಸ್ಥಳಾವಕಾಶ ಹಾಗೂ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾದ ಬಂಧೀಖಾನೆಗಳನ್ನೂ ಸಹ ನಿರ್ಮಿಸಿ ನ್ಯಾಯಾಲಯದ ಸುಗಮ ಕಾರ್ಯಕಲಾಪಕ್ಕೆ ಅವಕಾಶ ಕಲ್ಪಿಸಲಾಗಿದೆ.

ಒಟ್ಟಿನಲ್ಲಿ ನ್ಯಾಯಾಪೇಕ್ಷಿತ ಕಕ್ಷಿದಾರರಿಗೆ ಗುಣಮಟ್ಟದ ನ್ಯಾಯ ಒದಗಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುವ ಕಾರ್ಯ ನಿರ್ವಹಿಸುವ ನ್ಯಾಯಾಲಯಗಳು ಉತ್ತಮ ವಾತಾವರಣ ಹೊಂದಿದ್ದರೆ, ಬರುವ ಕಕ್ಷಿದಾರರ ಮುಖದಲ್ಲಿನ ಆತಂಕ ಆರಂಭದಲ್ಲಿಯೇ ಒಂದಿಷ್ಟು ಕಡಿಮೆಯಾಗಲು ಸಾಧ್ಯವಿದೆ. ಅಂತಹ ವಾತಾವರಣದೊಂದಿಗೆ ಜಿಲ್ಲಾ ನ್ಯಾಯಾಲಯ ಸೇರಿದಂತೆ ಎಲ್ಲ ನ್ಯಾಯಾಲಯಗಳು ಇನ್ನಷ್ಟು ಕ್ರಿಯಾಶೀಲವಾಗಿ, ಕಕ್ಷಿದಾರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಲಿ ಎನ್ನುವುದು ಪ್ರತಿಯೊಬ್ಬರ ಅಪೇಕ್ಷೆ .

ಉದ್ಘಾಟನೆ ಇಂದು...

ಧಾರವಾಡ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಿರ್ಮಾಣಗೊಂಡಿರುವ ನೂತನ ಮೊದಲ ಮತ್ತು ಎರಡನೆ ಮಹಡಿ ಶನಿವಾರ (ಜ.19) ಬೆಳಿಗ್ಗೆ 10.30 ಕ್ಕೆ ಉದ್ಘಾಟನೆಗೊಳ್ಳಲಿವೆ. ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ದಿನೇಶ ಮಾಹೇಶ್ವರಿ ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ಹೊಂದಿದ್ದು, ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಅಧ್ಯಕ್ಷತೆವಹಿಸಲಿದ್ದಾರೆ. ನ್ಯಾಯಮೂರ್ತಿಗಳಾದ ರವಿ ಮಳಿಮಠ, ಕೆ.ಎಸ್. ಮುದಗಲ್, ಬಿ.ಎ, ಪಾಟೀಲ, ಕೃಷ್ಣ ಎಸ್. ದಿಕ್ಷೀತ್, ಅಶೋಕ ಜಿ. ನಿಜಗಣ್ಣವರ, ಪಿ.ಜಿ.ಎಂ. ಪಾಟೀಲ ಮತ್ತು ಎ.ಎಸ್. ಬೆಳ್ಳುಂಕೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT