ಕಲಬುರ್ಗಿ: ಚಿಂಚೋಳಿ ತಾಲ್ಲೂಕು ಗಡಿಲಿಂಗದಳ್ಳಿಯಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಶೆಡ್ ಕುಸಿದು ಬಿದ್ದು ಲಲಿತಾಬಾಯಿ ಅಣ್ಣಪ್ಪ ಧನಶ್ರೀ (55) ಮೃತಪಟ್ಟಿದ್ದಾರೆ.
ಇವರು ಹೊಲದಲ್ಲಿ ಇರುವ ಶೆಡ್ನಲ್ಲಿ ವಾಸವಾಗಿದ್ದರು. ಶೆಡ್ ಮೇಲಿನ ಟಿನ್ ಶೀಟ್ ಹಾರಿಹೋಗಿ, ಆ್ಯಂಗಲ್ ಇವರ ತಲೆ ಮೇಲೆ ಬಿದ್ದಿದೆ. ಇವರ ಸೊಸೆ ಪ್ರೇಮಾ ಶಿವಕುಮಾರ್ ಅವರಿಗೆ ಗಾಯಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಮಲಾಪುರ ತಾಲ್ಲೂಕು ಗೋಗಿಯಲ್ಲಿ ಗುರುವಾರ ಸಿಡಿಲು ಬಡಿದು ಎಂಟು ಮೇಕೆ ಮೃತಪಟ್ಟಿವೆ.
ಕೆಲವೆಡೆ ಮಳೆ: ನಗರದ ಕೆಲವೆಡೆ ಶುಕ್ರವಾರ ಸಂಜೆ ಕೆಲಹೊತ್ತು ಮಳೆ ಸುರಿಯಿತು. ಶಹಾಬಾದ ರಸ್ತೆ, ವಿಶ್ವವಿದ್ಯಾಲಯ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ದಿನವಿಡೀ ಮೋಡ ಮುಸುಕಿದ ವಾತಾವರಣವಿತ್ತು.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಅಡವಿಭಾವಿಯಲ್ಲಿ ಗುರುವಾರ ರಾತ್ರಿ ಸಿಡಿಲಿನ ಆರ್ಭಟಕ್ಕೆ ಬೆದರಿದ ಕಾವೇರಿ ಪರಸಪ್ಪ ಹುಲಸಗೇರಿ(11) ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
ಮಳೆ ಬರುತ್ತಿದ್ದ ಸಮಯದಲ್ಲಿ ಮೊಬೈಲ್ಗೆ ಕರೆಯೊಂದು ಬಂದಿದೆ. ಮೊಬೈಲ್ನಲ್ಲಿ ಮಾತನಾಡಲು ಮನೆಯಿಂದ ಹೊರಗೆ ಬಂದಾಗ ಸಿಡಿಲು ಸದ್ದು ಕೇಳಿ ಹೆದರಿ ಸ್ಥಳದಲ್ಲಿಯೇ ಕುಸಿದು ಬಿದ್ದಳು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಸೇರಿದಂತೆ ಹಲವೆಡೆ ಶುಕ್ರವಾರ ಆಲಿಕಲ್ಲು ಮಳೆಯಾಗಿದೆ. ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಸಂಜೆ ಗುಡುಗು ಸಹಿತ ಜಿಟಿಜಿಟಿ ಮಳೆಯಾಗಿದೆ. ಔರಾದ್ ಹಾಗೂ ಭಾಲ್ಕಿ ಪಟ್ಟಣದಲ್ಲಿ ತುಂತುರು ಮಳೆಯಾಗಿದೆ.
ಗುಡುಗು ಸಹಿತ ಆಲಿಕಲ್ಲು ಮಳೆ (ರಿಪ್ಪನ್ಪೇಟೆ ವರದಿ): ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಗುಡುಗು–ಸಿಡಿಲು, ಆಲಿಕಲ್ಲು ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.
ಸಿಡಿಲು ಬಡಿದ ಪರಿಣಾಮ ಸಾಗರ ರಸ್ತೆಯ ಈದ್ಗಾ ಮೈದಾನದ ಹತ್ತಿರ ದೊಡ್ಡ ಮಾವಿನ ಮರ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ತ್ತುದು, ಕಂಬ ಮುರಿಯಿತು. ಒಂದು ಗಂಟೆ ವಾಹನ ಸಂಚಾರ ಬಂದ್ ಆಗಿತ್ತು. ಕಾಲೇಜು ಹತ್ತಿರ ತೆಂಗಿನ ಮರವೊಂದು ಅರ್ಧಕ್ಕೆ ತುಂಡಾಗಿ ನೆಲಕ್ಕುರುಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.