ಬೆಂಗಳೂರು: ಯಲಹಂಕದಲ್ಲಿರುವ ವಾಯುಪಡೆಯ ಕ್ಯಾಂಪಸ್ನೊಳಗೆ ನುಗ್ಗಿದ್ದ ಪಶ್ಚಿಮ ಬಂಗಾಳದ ನರೇಶ್ ಉರಾವೊ ಎಂಬಾತನನ್ನು ಭದ್ರತಾ ಸಿಬ್ಬಂದಿಯೇ ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
‘ಕೂಲಿ ಕಾರ್ಮಿಕನಾದ ನರೇಶ್, ಶನಿವಾರ ಬೆಳಿಗ್ಗೆ ಕ್ಯಾಂಪಸ್ನೊಳಗೆ ನುಗ್ಗಿ ನೀರಿನ ಟ್ಯಾಂಕ್ ಬಳಿ ಕುಳಿತುಕೊಂಡಿದ್ದ. ಆತನನ್ನು ಗಮನಿಸಿದ್ದ ಭದ್ರತಾ ಸಿಬ್ಬಂದಿ, ವಿಚಾರಣೆ ನಡೆಸಿ ನಮ್ಮ ವಶಕ್ಕೆ ಒಪ್ಪಿಸಿದ್ದಾರೆ’ ಎಂದು ಯಲಹಂಕ ಪೊಲೀಸರು ಹೇಳಿದರು.
‘ವಾಯುಪಡೆಯ ಕ್ಯಾಂಪಸ್ನಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಆರೋಪಿ ನರೇಶ್, ಕ್ಯಾಂಪಸ್ನ ಗೋಡೆಯನ್ನು ಜಿಗಿದು ಒಳಗೆ ನುಗ್ಗಿದ್ದ. ಭದ್ರತಾ ಸಿಬ್ಬಂದಿ ವಿಚಾರಿಸುತ್ತಿದ್ದಂತೆ, ಉತ್ತರಿಸಲು ತಡವರಿಸಿದ್ದ’ ಎಂದರು.
‘ಆರೋಪಿಯು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ. ಯಾವ ಕಾರಣಕ್ಕಾಗಿ ಆತ ಒಳಗೆ ಹೋಗಿದ್ದ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.