ಬೆಂಗಳೂರು: ಪಿಯು ಪರೀಕ್ಷಾ ಮಂಡಳಿಯ ಜಂಟಿ ನಿರ್ದೇಶಕ ಡಾ. ಎಸ್. ಆಕಾಶ್ ಅವರ ಬ್ಯಾಂಕ್ ಖಾತೆಯಿಂದ ₹ 20 ಸಾವಿರ ಡ್ರಾ ಮಾಡಿಕೊಂಡು ವಂಚಿಸಲಾಗಿದ್ದು, ಆ ಸಂಬಂಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಂಚನೆ ಸಂಬಂಧ ಆಕಾಶ್ ಅವರೇ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ವಂಚನೆ ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.
‘ಆಕಾಶ್ ಅವರು ‘ಅಪ್ಟೌನ್18 ಡಾಟ್ ಇನ್’ ಜಾಲತಾಣದಲ್ಲಿ ಮಾರಾಟಕ್ಕಿದ್ದ ಕೆಲ ಸಾಮಗ್ರಿಗಳನ್ನು ಕಾಯ್ದಿರಿಸಿದ್ದರು. ಪರಿಶೀಲನೆ ನೆಪದಲ್ಲಿ ಕರೆ ಮಾಡಿದ್ದ ವಂಚಕ, ‘ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ನೀಡಿ’ ಎಂದು ಕೇಳಿದ್ದ. ಆತನಿಗೆ ದೂರುದಾರರು ಮಾಹಿತಿ ನೀಡಿದ್ದರು.’
‘ಕರೆ ಕಡಿತಗೊಳಿಸಿದ್ದ ವಂಚಕ ಪುನಃ ಕರೆ ಮಾಡಿರಲಿಲ್ಲ. ವಾಪಸ್ ಕರೆ ಮಾಡಿದರೂ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅದಾದ ನಂತರವೇ ಆಕಾಶ್ ಅವರ ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ ವಂಚಕ ₹ 20 ಸಾವಿರ ಡ್ರಾ ಮಾಡಿಕೊಂಡು ವಂಚಿಸಿದ್ದಾನೆ’ ಎಂದು ಹೇಳಿದರು.