ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಹಬ್ಬದ ಖರೀದಿ ಹಂಗಾಮ: ಬೂದುಗುಂಬಳ ವ್ಯಾಪಾರ ಜೋರು: ಈರುಳ್ಳಿ ಬೆಲೆ ಇಳಿಕೆ

ಕೆ.ಆರ್‌.ಮಾರುಕಟ್ಟೆಯಲ್ಲಿ ಖರೀದಿ: ಹೂವಿನ ದರಗಳು ಕೊಂಚ ಏರಿಕೆ
Last Updated 4 ಅಕ್ಟೋಬರ್ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಮಾರುಕಟ್ಟೆಯಲ್ಲಿ ದಸರಾ ವಿಶೇಷ ಎಂದೇ ಕರೆಯಲ್ಪಡುವ ಬಾಳೆ ಕಂಬ ಹಾಗೂ ಬೂದುಗುಂಬಳ ರಾಶಿಯೇ ಬಂದಿಳಿದಿದ್ದು, ಶುಕ್ರವಾರ ಮಾರಾಟ ಭರದಿಂದ ಸಾಗಿತು.

ಒಂದು ಮಾರು ಸೇವಂತಿಗೆ ಹೂವು ₹60ರಿಂದ ₹80ರಂತೆ ಮಾರಾಟವಾಯಿತು. ವಾಹನ ಮತ್ತು ಅಂಗಡಿ ಮುಂಗಟ್ಟುಗಳ ಮುಂದೆ ಕಟ್ಟುವ ಬಾಳೆ ಕಂಬಕ್ಕೂ ಹೆಚ್ಚಿನ ಬೇಡಿಕೆ ಇತ್ತು. ಸಣ್ಣ ಬಾಳೆ ಕಂಬದ ಬೆಲೆ ಜೋಡಿಗೆ ₹40ರಂತೆ ಬಿಕರಿಯಾಯಿತು.

ಕಳೆದ ವಾರವಷ್ಟೇ ₹80ರ ಗಡಿ ದಾಟಿದ್ದ ಈರುಳ್ಳಿ ದರ ದಿಢೀರ್‌ ಕುಸಿತವಾಗಿದ್ದು, ಪ್ರತಿ ಕೆ.ಜಿ.ಗೆ ₹30ರಿಂದ ₹40ರಂತೆ ಹಾಗೂ ₹100ಕ್ಕೆ ಮೂರು ಕೆ.ಜಿ.ಯಂತೆ ಮಾರಾಟವಾಯಿತು. ಉಳಿದ ತರಕಾರಿಗಳ ದರ ಕಡಿಮೆ ಇದ್ದುದು ಗ್ರಾಹಕರ ನಿರಾಳರಾಗಲು ಕಾರಣವಾಗಿತ್ತು.

ಹೂವಿನ ದರಗಳು ಕೊಂಚ ಏರಿಕೆ ಕಂಡಿದ್ದು, ಕನಕಾಂಬರ ಪ್ರತಿ ಕೆ.ಜಿ.ಗೆ ₹1,200, ಮಲ್ಲಿಗೆ ₹700 ದರವಿತ್ತು. ಹಣ್ಣಿನ ಬೆಲೆ ಸ್ಥಿರತೆ ಕಂಡುಬಂತು.

‘ಹಬ್ಬದ ವೇಳೆ ಗ್ರಾಹಕರು ಒಂದು ವಾರ ನಿರಂತರವಾಗಿ ಹೂವು, ಹಣ್ಣು, ತರಕಾರಿ ಖರೀದಿಸುತ್ತಾರೆ. ಕೆಲವರು ಈ ತಿಂಗಳೆಲ್ಲಾ ಆಯುಧ ಪೂಜೆ ಮಾಡುತ್ತಾರೆ. ಹೀಗಾಗಿ, ಪೂಜಾ ಸಾಮಗ್ರಿಗಳ ವ್ಯಾಪಾರದಿಂದ ಸ್ವಲ್ಪ ಲಾಭ ಪಡೆಯಬಹುದು’ ಎಂದು ವ್ಯಾಪಾರಿ ಮುನೇಶ್‌ ತಿಳಿಸಿದರು.

‘ಈರುಳ್ಳಿ ದರ ಏರಿಕೆಯಾದ ಸುದ್ದಿ ಕೇಳಿ ಗಾಬರಿಗೊಂಡೆ. ಈ ಬಾರಿ ದಸರಾ ಆಚರಣೆ ದುಬಾರಿಯಾಗುತ್ತದೆ ಎಂದುಕೊಂಡಿದ್ದೆ. ಆದರೆ, ಈರುಳ್ಳಿ ಬೆಲೆ ಕಡಿಮೆಯಾಗಿದೆ. ಉಳಿದ ತರಕಾರಿಗಳ ಬೆಲೆಯೂ ಅಷ್ಟೇನೂ ಜಾಸ್ತಿಯಾಗಿಲ್ಲ’ ಎಂದು ಗೃಹಿಣಿ ಹೇಮಶ್ರೀ ತಿಳಿಸಿದರು.

* ಹೂವು, ಹಣ್ಣು, ತರಕಾರಿಗಳ ಬೆಲೆ ಸ್ವಲ್ಪ ಏರಿಕೆಯಾಗಿದೆ. ಆಯುಧ ಪೂಜೆಯಷ್ಟರಲ್ಲಿ ಇನ್ನೂ ದರ ಏರಬಹುದು. ಹೀಗಾಗಿ ಮೊದಲೇ ಎಲ್ಲವನ್ನೂ ಖರೀದಿಸಿದ್ದೇನೆ.

-ಮಾರುತಿ, ಗ್ರಾಹಕ

*ದಸರಾಗೆ ಹಣ್ಣುಗಳನ್ನು ಹೆಚ್ಚಾಗಿ ಖರೀದಿಸುವುದಿಲ್ಲ. ಪೂಜೆಗೆ ಇಡಲು ನಾಲ್ಕೈದು ರೀತಿಯ ಹಣ್ಣು ಕೇಳುತ್ತಾರೆ. ಹಣ್ಣಿನ ವ್ಯಾಪಾರ ನಡೆಯುವುದಿಲ್ಲ. ದರ ಸ್ಥಿರತೆ ಕಾಯ್ದುಕೊಂಡಿದೆ

-ಕಮಲಮ್ಮ, ಹಣ್ಣಿನ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT