ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಶರಥ’ ಚಿತ್ರದ ಹಾಡಿಗೆ ಆಕ್ಷೇಪ: ಮಧ್ಯಂತರ ತಡೆ

Last Updated 5 ಏಪ್ರಿಲ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ನಟ ರವಿಚಂದ್ರನ್ ಅಭಿನಯದ ‘ದಶರಥ’ ಚಲನಚಿತ್ರದ ಹಾಡೊಂದರಲ್ಲಿ ವಕೀಲರನ್ನು ಕುರಿತು ಬಳಸಲಾದ ಆಕ್ಷೇಪಾರ್ಹ ಪದಗಳ ಬಳಕೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ವಕೀಲ ಗಾದಿ ಲಿಂಗಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಜಿ.ನಿಜಗಣ್ಣವರ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ನಿರ್ಮಾಪಕ ಕೆ.ಅಕ್ಷಯ ಮಹೇಶ್‌, ನಿರ್ದೇಶಕ ಎಂ.ಎಸ್.ರಮೇಶ್, ಗೀತ ರಚನೆಕಾರ ವಿ.ಮನೋಹರ್, ಸಂಗೀತ ನಿರ್ದೇಶಕ ಗುರು ಕಿರಣ್, ಹಿನ್ನೆಲೆ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ದೊಡ್ಡಪ್ಪ ಮಾದರ್ ಮತ್ತು ಲಹರಿ ಆಡಿಯೊ ರೆಕಾರ್ಡಿಂಗ್ ಕಂಪನಿ ಪ್ರತಿನಿಧಿ ಜಿ.ಮನೋಹರನ್‌ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಪ್ರಕರಣವೇನು?: ‘ಚಿತ್ರದ ಹಾಡಿನಲ್ಲಿ ವಕೀಲರು ಮತ್ತು ಕೋರ್ಟ್‌ ಘನತೆಗೆ ಧಕ್ಕೆಯಾಗುವಂತಹ ಶಬ್ದಗಳನ್ನು ಬಳಸಲಾಗಿದೆ. ವಕೀಲಿಕೆ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಅಪಹಾಸ್ಯಕ್ಕೆ ಗುರಿಮಾಡಲಾಗಿದೆ. ಧರ್ಮಗಳನ್ನು ಅವಮಾನಿಸಲಾಗಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

‘ಈ ಚಿತ್ರದ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಆದ್ದರಿಂದ ಇದನ್ನು ಕೈಬಿಡಲು ಚಿತ್ರತಂಡಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಅರ್ಜಿದಾರರು 9ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಮನವಿಯನ್ನು ಪರಿಗಣಿಸಲು ಅಧೀನ ಕೋರ್ಟ್ ನಿರಾಕರಿಸಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT