ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ಜರುಗುವ ದತ್ತಮಾಲಾ ಅಭಿಯಾನವು ಸೋಮವಾರ ವಿಧ್ಯುಕ್ತವಾಗಿ ಆರಂಭವಾಯಿತು, ನಗರದ ರತ್ನಗಿರಿ ರಸ್ತೆಯ ಕಾಮಧೇನು ಮಹಾಶಕ್ತಿ ಗಣಪತಿ ದೇಗುಲದಲ್ಲಿ ಭಕ್ತರಿಗೆ ಮಾಲಾಧಾರಣೆ ಕೈಂಕರ್ಯ ನೇರವೇರಿತು.
ದೇಗುಲ ಆವರಣದಲ್ಲಿ ದತ್ತ ಭಕ್ತರು ಭಜನೆ ಮಾಡಿ ದತ್ತಾತ್ರೇಯರ ನಾಮಸ್ಮರಣೆ ಮಾಡಿದರು. ಗುರುದತ್ತಾತ್ರೇಯರ ಚಿತ್ರಪಟಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಸ್ಥಾನದ ಅರ್ಚಕ ಚಂದ್ರು ಅವರು ಭಕ್ತರ ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕುವ ಮೂಲಕ 13ನೇ ವರ್ಷದ ಅಭಿಯಾನಕ್ಕೆ ಚಾಲನೆ ದೊರಕಿತು.
ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷ ಕಟ್ಟಿನಮನೆ ಮಹೇಶ್ ಕುಮಾರ್ ಕಟ್ಟಿನಮನೆ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಇತರರು ಮಾಲೆ ಧರಿಸಿದರು. ಏಳು ದಿನ ವ್ರತಾಚರಣೆ ನಡೆಯಲಿದೆ.
ಮಾಲಾಧಾರಿಗಳು ಏಳು ದಿನ ಶ್ರದ್ಧೆಯಿಂದ ವ್ರತ ಆಚರಿಸಬೇಕು. ಪ್ರತಿನಿತ್ಯ ದೇಗುಲಕ್ಕೆ ತೆರಳಿ ಪೂಜೆ, ಭಜನೆ ಮಾಡಬೇಕು. ದತ್ತಪೀಠಕ್ಕೆ ತೆರಳುವ ಹಿಂದಿನ ದಿನ ಕನಿಷ್ಠ ಮೂರು ಮನೆಯಲ್ಲಿ ಭಿಕ್ಷಾಟನೆ ಮಾಡಿ ಪಡಿ (ಅಕ್ಕಿ, ಬೆಲ್ಲ) ಸಂಗ್ರಹಿಸಿ, ಪೀಠಕ್ಕೆ ಒಯ್ಯಬೇಕು.
ಪೀಠಕ್ಕೆ ತೆರಳುವ ಮಾರ್ಗದಲ್ಲಿ ಹೊನ್ನಮ್ಮನ ಹಳ್ಳದಲ್ಲಿ ಮಿಂದು, ಹೊನ್ನಮ್ಮ ದೇವಿ ದರ್ಶನ ಮಾಡಬೇಕು. ಇರುಮುಡಿಯಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿಯೊಂದಿಗೆ ಪೀಠದಲ್ಲಿ ದತ್ತಪಾದುಕೆ ದರ್ಶನ ಮಾಡಬೇಕು.
ಇದೇ 28ರಂದು ಅಭಿಯಾನದಂ ಅಂಗವಾಗಿ ನಗರದಲ್ಲಿ ಶೋಭಾಯಾತ್ರ ಜರುಗಲಿದೆ.
ಯಾತ್ರೆಯು ಅಂದು ಬೆಳಿಗ್ಗೆ 9.30ಕ್ಕೆ ಕಾಮಧೇನು ಮಹಾಶಕ್ತಿ ಗಣಪತಿ ದೇಗುಲದಿಂದ ಹೊರಟು ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಆಜಾದ್ಪಾರ್ಕ್ ವೃತ್ತ ತಲುಪಲಿದೆ. ವೃತ್ತದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ನಂತರ, ದತ್ತಭಕ್ತರು ಗಿರಿಗೆ ತೆರಳುವರು.
ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ಸತೀಶ್ ಪೂಜಾರ್, ಭರತ್, ರಾಘವೇಂದ್ರ, ದುರ್ಗಾ ಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ ಇದ್ದರು.