ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬರೀಷ್ ನೆನಪಿದೆ, ಅನಂತ್‌ ನೆನಪಿಲ್ಲ ಏಕೆ: ದಿನೇಶ್ ಗುಂಡೂರಾವ್

Last Updated 12 ಏಪ್ರಿಲ್ 2019, 20:32 IST
ಅಕ್ಷರ ಗಾತ್ರ

ಬೆಂಗಳೂರು: ‘ಚುನಾವಣೆಯಲ್ಲಿ ಮತ ಪಡೆಯುವ ಸಲುವಾಗಿ ಅಂಬರೀಷ್‌ ನೆನಪಿಸಿಕೊಂಡಿರುವ ‍ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಅನಂತಕುಮಾರ್ ನೆನಪಿಲ್ಲ ಏಕೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಿದರು. ‘ಮಂಡ್ಯದಲ್ಲಿ ಸುಮಲತಾ ಅವರಿಗೆ ಆಶೀರ್ವಾದ ಮಾಡಿ ಎಂದು ಹೇಳಿದ್ದೀರಿ. ಆದರೆ, ಅನಂತಕುಮಾರ್ ಪತ್ನಿ ತೇಜಸ್ವಿನಿಗೆ ಅವರಿಗೆ ಟಿಕೆಟ್‌ ನಿರಾಕರಿಸಿದ್ದಿರಿ ಏಕೆ’ ಎಂದು ಕೇಳಿದರು.

‘2ಜಿ ಹಗರಣ ಕಾಂಗ್ರೆಸ್ ಕೊಡುಗೆ ಎಂದಿದ್ದೀರಿ, ಈ ಹಗರಣದ ತನಿಖೆ ನಡೆಸಲು ಜೆಪಿಸಿಗೆ (ಜಂಟಿ ಸದನ ಸಮಿತಿ) ಯುಪಿಎ ಸರ್ಕಾರ ಅನುಮತಿ ನೀಡಿತ್ತು. ನಿಮ್ಮ ಆಡಳಿತದಲ್ಲಿ ನಡೆದಿರುವ ರಫೆಲ್ ಹಗರಣದ ತನಿಖೆಗಾಗಿ ಜೆಪಿಸಿಗೆ ಅನುಮತಿ ನೀಡದಿರುವುದೇಕೆ’ ಎಂದು ಪ್ರಶ್ನೆ ಮಾಡಿದರು.

‘ಭಯೋತ್ಪಾದಕರಲ್ಲಿ ಆಳವಾದ ಭಯ ಹುಟ್ಟಿಸಿದ್ದೇವೆ ಎಂದಿದ್ದೀರಿ. ನಿಮ್ಮ ಆಡಳಿತದಲ್ಲಿ ಸುಮಾರು 489 ಸೈನಿಕರು ಹುತಾತ್ಮರಾದರು. 278 ನಾಗರಿಕರು ಸಾವನ್ನಪ್ಪಿದ್ದಾರೆ. ಸುಮಾರು 524 ಯುಕವರು ಉಗ್ರಗಾಮಿಗಳಾದರು. ಪಠಾಣ್‌ಕೋಟ್, ಪುಲ್ವಾಮಾ ದಾಳಿ ಆಯಿತು. ಮಸೂದ್ ಅಜಾರ್‌ನನ್ನು ಬಿಟ್ಟಿದ್ದು ನಿಮ್ಮ ಸರ್ಕಾರದ ವೈಫಲ್ಯ. ಇದಕ್ಕೆ ನಿಮ್ಮ ಉತ್ತರವೇನು?’ ಎಂದು ಕೇಳಿದರು.

‘ಸಬ್‌ ಕಾ ಸಾತ್, ಸಬ್‌ ಕಾ ವಿಕಾಸ್ ಎನ್ನುವ ನೀವು ಕರ್ನಾಟಕಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡದಿರುವುದು ಆ ವರ್ಗಕ್ಕೆ ಮಾಡಿದ ಮಹಾದ್ರೋಹ ಅಲ್ಲವೇ’ ಎಂದು ಪ್ರಶ್ನಿಸಿದರು.

ಈ ಎಲ್ಲಾ ಪ್ರಶ್ನೆಗಳಿಗೂ ಮೋದಿ ಉತ್ತರ ನೀಡಬೇಕು. ಅವರ ಅವಧಿಯ ಸಾಧನೆ ಬಗ್ಗೆ ಮೋದಿ ಮಾತನಾಡುತ್ತಿಲ್ಲ. ಕಾಂಗ್ರೆಸ್‌ ಪಕ್ಷವನ್ನು ಟೀಕಿಸುವುದೇ ಅವರ ಕೆಲಸವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT