ದಾವಣಗೆರೆ: ಸಾಹಿತಿ ಕೆ.ಎಸ್. ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 21ರಂದು ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿ ಎಸ್ಐಟಿ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುವಾಗ ಎಸ್ಐಟಿ ಅಧಿಕಾರಿಗಳಿಗೆ ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳ ಜಾಡು ಸಿಕ್ಕಿದೆ. ಪ್ರಕರಣದ ಬೆನ್ನು ಹತ್ತಿದ ಅಧಿಕಾರಿಗಳು ಆರೋಪಿಗಳನ್ನು ಹಿಡಿದಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಶಿಕಾರಿಪುರ ತಾಲ್ಲೂಕು ಕಪ್ಪನ ಹಳ್ಳಿಯ ಸುಜಿತ್ ಕುಮಾರ್ ಸನಾತನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ. ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ಸಂಸ್ಥೆಯ ಸಂಘಟನೆಗಾಗಿ ದುಡಿಯುತ್ತಿದ್ದ. ಹರಿಹರ ತಾಲ್ಲೂಕು ಗುಳ್ಳದಹಳ್ಳಿ ಸಮೀಪದ ನೆಹರೂ ನಗರ ಕ್ಯಾಂಪ್ ಈತನ ತಾಯಿಯ ತವರು ಮನೆ.
ಸುಜಿತ್ನ ಅಜ್ಜಿ ಮನೆಯಲ್ಲೂ ಎಸ್ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪಿಸ್ತೂಲ್ ಮತ್ತು ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.