ದೇವನಹಳ್ಳಿ: ‘ದಲಿತ ಸಂಘರ್ಷ ಸಮಿತಿ ರಾಜ್ಯ ಮಟ್ಟದ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಮಿತಿ ಬೆಂಗಳೂರು ವಿಭಾಗೀಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.
ಸಮಾವೇಶದ ಕುರಿತು ಮಾತನಾಡಿದ ಅವರು, ’ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರ 62ನೇ ಪರಿನಿರ್ವಾಣ ದಿನಾಚರಣೆ ಹಾಗೂ ಸಮಿತಿಯ ರಾಜ್ಯ ಮಟ್ಟದ ಸರ್ವ ಸದಸ್ಯರ ಸಭೆ ದೇವನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇದೇ 8 ಮತ್ತು 9 ರಂದು ನಡೆಯಲಿದೆ’ ಎಂದು ತಿಳಿಸಿದರು.
‘ದಲಿತ ಸಂಘರ್ಷ ಸಮಿತಿ ಒಂದು ಪ್ರಜಾಸತ್ತಾತ್ಮಕ ಚಳವಳಿಯಾಗಿದೆ. 1970ರಲ್ಲಿ ಆರಂಭಗೊಂಡ ಸಂಘಟನೆಯು ಅಂಬೇಡ್ಕರ್ ಅವರ ಆಶಯದಂತೆ ನಡೆಯುತ್ತಿದೆ’ ಎಂದರು.
‘ಸ್ವಾಭಿಮಾನದ ಬದುಕಿಗಾಗಿ ತಲೆ ಎತ್ತುವ ದಲಿತರನ್ನು ದಮನಿಸುವ ಪ್ರವೃತ್ತಿಯ ವಿಷಯದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ’ ಎಂದು ತಿಳಿಸಿದರು.