ಬೆಂಗಳೂರು: ಈದ್ ಮಿಲಾದ್ ಪ್ರಯುಕ್ತ ನಗರದಲ್ಲಿ ಬುಧವಾರ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು.
ಕೆ.ಆರ್. ಮಾರುಕಟ್ಟೆಯಿಂದ ಪುರಭವನದ ಮೂಲಕ ಸಾಗಿದ ಮೆರವಣಿಗೆಯಲ್ಲಿ ಮಕ್ಕಳು ಪ್ರಮುಖ ಕೇಂದ್ರಬಿಂದುವಾಗಿದ್ದರು. ಕೈಯಲ್ಲಿ ಬಲೂನ್ಗಳನ್ನು ಹಿಡಿದು ಸಾಗಿದರು. ದಾರಿಯಲ್ಲಿ ಸಿಕ್ಕ ಇತರರಿಗೂ ಶುಭಾಶಯ ಕೋರುವ ಮೂಲಕ ಏಕತೆಯನ್ನು ಸಾರಿದರು. ವೈಎಂಸಿಎ ಮೈದಾನದವರೆಗೆ ಮೆರವಣಿಗೆ ಸಾಗಿತು.
ಇಸ್ಲಾಮಿಕ್ ಕಲಾ ತಂಡಗಳು ಭಾಗವಹಿಸುವ ಮೂಲಕ ರಂಗು ಹೆಚ್ಚಿತ್ತು. ವಾಹನದಲ್ಲಿ ಹಾಗೂ ಕಾಲ್ನಡಿಗೆಯಲ್ಲೂ ಭಾಗವಹಿಸಿದ ಮುಸ್ಲಿಂ ಬಾಂಧವರು ಒಬ್ಬರಿಗೊಬ್ಬರು ಶುಭಾಶಯ ವಿನಿಯಮ ಮಾಡಿಕೊಂಡರು.ಮೆರವಣಿಗೆಯುದ್ದಕ್ಕೂ ಸಿಹಿ ತಿಂಡಿಗಳನ್ನು ಹಂಚಿ ಖುಷಿಪಟ್ಟರು. ಬಾವುಟಗಳು ರಾರಾಜಿಸಿದವು.
ಸಂಚಾರ ದಟ್ಟಣೆ: ಈದ್ ಮಿಲಾದ್ ಪ್ರಯುಕ್ತ ನಡೆಸಿದ ಮೆರವಣಿಗೆಯಿಂದ ನಗರದ ಕೆಲವು ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಮಿನರ್ವ ವೃತ್ತಾ, ಜೆ.ಸಿ.ರಸ್ತೆ, ಪುರಭವನ ಮಾರ್ಗದಲ್ಲಿ ದಟ್ಟಣೆ ಇತ್ತು.
ಹೊಸಕೋಟೆಯಲ್ಲಿ ಈದ್: ತಾಲ್ಲೂಕಿನಾದ್ಯಂತ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಾಮಿಯಾ ಮಸೀದಿಯಿಂದ ಹೊರಟ ಮೆರವಣಿಗೆಯಲ್ಲಿ ವಿವಿಧ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಮುಸ್ಲಿಂ ಟ್ರಸ್ಟ್ ವತಿಯಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.