ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲಿವೇಟೆಡ್‌ ಕಾರಿಡಾರ್‌: ಒತ್ತಡಕ್ಕೆ ಮಣಿಯದಿರಿ’

ಎಸ್‌ಇಐಎಎಗೆ ಪರಿಸರ ಸಂಘಟನೆಗಳ ಮನವಿ
Last Updated 5 ಜನವರಿ 2019, 20:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣಾ ಏಜೆನ್ಸಿಯ (ಎಸ್‌ಇಐಎಎ) ಅಧಿಕಾರಿಗಳು ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಅಧ್ಯಯನ ವರದಿ ತಯಾರಿಸುವಾಗ ರಾಜಕೀಯ ಒತ್ತಡಗಳಿಗೆ ಮಣಿಯಬಾರದು ಎಂದು ಪರಿಸರಾಸಕ್ತ ಸಂಘಟನೆಗಳು ಒತ್ತಾಯಿಸಿವೆ.

ಎಸ್‌ಇಐಎಎ ಸದಸ್ಯ ಕಾರ್ಯದರ್ಶಿಯನ್ನು ಶನಿವಾರ ಭೇಟಿಯಾದ ಸಿಟಿಜನ್ಸ್‌ ಫಾರ್‌ ಬೆಂಗಳೂರು (ಸಿಎಫ್‌ಬಿ), ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ (ಬಿಬಿವಿಪಿ), ಎನ್‌ವಿರಾನ್‌ಮೆಂಟಲ್‌ ಸಪೋರ್ಟ್‌ ಗ್ರೂಪ್‌ (ಇಎಸ್‌ಜಿ), ಬೆಂಗಳೂರು ಎನ್‌ವಿರಾನ್‌ಮೆಂಟ್‌ ಟ್ರಸ್ಟ್‌ (ಬಿಇಟಿ) ಹಾಗೂ ಸಿವಿಕ್‌ ಸಂಘಟನೆಗಳ ಪದಾಧಿಕಾರಿಗಳನ್ನು ಒಳಗೊಂಡ ನಿಯೋಗವು ಈ ಕುರಿತು ಮನವಿ ಸಲ್ಲಿಸಿತು.

‘ಈ ಯೋಜನೆಯು ಪರಿಸರಕ್ಕೆ ಸಂಬಂಧಿಸಿದ ಅನೇಕ ಕಾನೂನುಗಳನ್ನು ಉಲ್ಲಂಘಿಸುತ್ತದೆ. ಎಸ್‌ಇಐಎಎ ನಿಲುವೇನಿದ್ದರೂ ಸಾರ್ವಜನಿಕ ಹಿತವನ್ನು ಕಾಯುವಂತಿರಬೇಕು. ಪರಿಸರ ಸಂರಕ್ಷಣೆಗೆ ಪೂರಕವಾಗಿರಬೇಕು’ ಎಂದು ನಿಯೋಗವು ಒತ್ತಾಯಿಸಿತು.

‘ಈ ಯೋಜನೆ ಜಾರಿಯಾದರೆ ಕರ್ನಾಟಕ ಪಟ್ಟಣ, ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆಯನ್ನು ಹಾಗೂ ರಾಜ್ಯದ ಹೈಕೋರ್ಟ್‌ನ ಆದೇಶಗಳ ಉಲ್ಲಂಘನೆಯಾಗಲಿದೆ. ಸಂಚಾರ ವ್ಯವಸ್ಥೆಗೆ ಸಮಗ್ರ ಯೋಜನೆ ರೂಪಿಸದೆ ಪ್ರತ್ಯೇಕವಾಗಿ ಯೋಜನೆಗಳನ್ನು ಏಕಕಾಲದಲ್ಲಿ ಅನುಷ್ಠಾನಗೊಳಿಸುವುದು ಸಾಧುವಲ್ಲ’ ಎಂದು ನಿಯೋಗದ ಸದಸ್ಯರು ಎಸ್‌ಇಐಎಎ ಗಮನಕ್ಕೆ ತಂದರು.

ಪೋಸ್ಟ್‌ ಕಾರ್ಡ್‌ ಚಳವಳಿಗೆ ನಿರ್ಧಾರ

ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಅನುಷ್ಠಾನಕ್ಕೆ ಮುನ್ನ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಒತ್ತಾಯಿಸಿ ಪೋಸ್ಟ್‌ ಕಾರ್ಡ್‌ ಚಳವಳಿ ಹಮ್ಮಿಕೊಳ್ಳುವುದಾಗಿ ನಿಯೋಗದಲ್ಲಿದ್ದ ಸಂಘಟನೆಗಳ ಪ್ರಮುಖರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT