ಬೆಂಗಳೂರು: ವೀರಶೈವ– ಲಿಂಗಾಯತ ಸಮುದಾಯಕ್ಕೆ ರಾಷ್ಟ್ರ ಮಟ್ಟದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಉದ್ದೇಶಿಸಿದೆ.
ವೀರಶೈವ ಮತ್ತು ಲಿಂಗಾಯತರು ಒಂದಾಗುವ ಪ್ರಕ್ರಿಯೆಗೆ ಚಾಲನೆಗೆ ಸಿಕ್ಕಿರುವ ಬೆನ್ನಲ್ಲೆ ಇಂತಹದ್ದೊಂದು ಪ್ರಸ್ತಾಪವನ್ನು ಮಹಾಸಭಾ ಮುಂದಿಟ್ಟಿದೆ.
ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿರುವ ವೀರಶೈವ ಮಹಾಸಭಾ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ, ಅಲ್ಪಸಂಖ್ಯಾತರ ಸ್ಥಾನ ಕೇಳುವುದು ಸಮುದಾಯವನ್ನು ದಾರಿ ತಪ್ಪಿಸುವ ವಿಚಾರ.
ಅದರಿಂದ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗುತ್ತದೆ. ಜನ ಸಾಮಾನ್ಯರಿಗೆ ಪ್ರಯೋಜನ ಆಗುವುದಿಲ್ಲ. ಒಬಿಸಿ ಮಾನ್ಯತೆಯಿಂದ ಮೀಸಲಾತಿ ಪ್ರಯೋಜನಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಎಂದಿದ್ದಾರೆ.
ವೀರಶೈವ– ಲಿಂಗಾಯತರನ್ನು ಈಗ ಹಿಂದುಳಿದವರು ಎಂದು ಪರಿಗಣಿಸಲಾಗಿದೆ. 3 ಬಿ ವಿಭಾಗದಡಿ ಸೇರಿಸಲಾಗಿದೆ. ಇದರಿಂದ ಶೇ 5 ರಷ್ಟು ಮೀಸಲಾತಿ ಸಿಗುತ್ತಿದೆ. ಒಬಿಸಿಗೆ ಸೇರಿಸಿದರೆ ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ 27 ರಷ್ಟು ಮೀಸಲಾತಿ ಸಿಗುತ್ತದೆ.
ಈಗ ವೀರಶೈವ– ಲಿಂಗಾಯತ ಸಮುದಾಯದ ಕೆಲವೇ ಉಪಜಾತಿಗಳಿಗೆ ಈ ಸೌಲಭ್ಯ ಸಿಗುತ್ತಿದೆ ಎಂದು ವಿದ್ವಾಂಸ ಬಸವರಾಜ ಪಿ.ಡೊಣೂರ ಅವರು ತಿಳಿಸಿದ್ದಾರೆ.