ಬೆಂಗಳೂರು: ಜಾಗತಿಕ ತಾಪಮಾನ ತುರ್ತು ಪರಿಸ್ಥಿತಿ ಘೋಷಣೆಗೆ ಆಗ್ರಹಿಸಿ ಪರಿಸರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪರಿಸರ ಕಾರ್ಯಕರ್ತರು ಪುರಭವನದ ಬಳಿ ಭಾನುವಾರ ಧರಣಿ ನಡೆಸಿದರು.
ಪ್ರಕೃತಿ ವಿಸ್ಮಯಗಳ ಕಣಜ. ಮಾನವ ಹಸ್ತಕ್ಷೇಪದಿಂದ ಜಗತ್ತು 6ನೇ ಮಹಾನಾಶದ ಭೀತಿ ಎದುರಿಸುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಮಾನವನಿರ್ಮಿತ ಹವಾಮಾನ ವೈಪರೀತ್ಯ ಸರಿಪಡಿಸಲು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಪರಿಸರ ಕಾರ್ಯಕರ್ತರು ಒತ್ತಾಯಿಸಿದರು.
‘ಜನರ ಲಾಭ ಮತ್ತು ಮೋಜಿಗಾಗಿ ಅರಣ್ಯ ನಾಶ ಮಾಡುವ ಮೂಲಕ ಇಡೀ ನಾಗರಿಕತೆಯನ್ನು ಮತ್ತು ಸಮಸ್ತ ಜೀವಸಂಕುಲವನ್ನು ಬಲಿ ಕೊಡುವುದು ಸರಿಯಲ್ಲ. ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಪರಿಸರ ಸಂರಕ್ಷಣೆ ಆದ್ಯತಾ ವಿಷಯವಾಗಬೇಕು’ ಎಂದು ಒತ್ತಾಯಿಸಿದರು.
ಪರಿಸರ ಸಂರಕ್ಷಣೆ ಕುರಿತು ರಾಜ್ಯದಾದ್ಯಂತ ಆಂದೋಲನ ರೂಪಿಸಲಿದ್ದೇವೆ. ಹಲವು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ರಾಜಕೀಯ ಪಕ್ಷಗಳಿಗೆ ಸಲ್ಲಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ತುರ್ತು ಅಗತ್ಯವಿದೆ. ಈ ಸಲುವಾಗಿ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ದುಬಾರಿ ತೆರಿಗೆ ವಿಧಿಸಬೇಕು ಎಂದು ಒತ್ತಾಯಿಸಿದರು.