ಬೆಂಗಳೂರು: ‘ಕಾವೇರಿ ಕೂಗು ಯೋಜನೆಯಡಿ ಗಿಡ ಬೆಳೆಸಲು ಸಾರ್ವಜನಿಕರಿಂದ ಹಣ ವಸೂಲಿಗೆ ಮುಂದಾಗಿರುವುದು ಆಕ್ಷೇಪಾರ್ಹವಾಗಿದೆ’ ಎಂದು ಇಶಾ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಹೈಕೋರ್ಟ್ ವಕೀಲ ಎ.ವಿ.ಅಮರನಾಥನ್ ಈ ಅರ್ಜಿ ಸಲ್ಲಿಸಿದ್ದು ಇದಿನ್ನೂ ವಿಚಾರಣೆಗೆ ಬರಬೇಕಿದೆ. ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನೂ ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಆಕ್ಷೇಪಣೆ ಏನು?: ‘ಕಾವೇರಿ ತಟದ 639 ಕಿ.ಮೀ ಉದ್ದಗಲಕ್ಕೂ 253 ಕೋಟಿ ಗಿಡ ನೆಡಲು ಇಶಾ ಫೌಂಡೇಶನ್ ಉದ್ದೇಶಿಸಿದೆ. ಇದಕ್ಕಾಗಿ ಸಾರ್ವಜನಿಕರಿಂದ 1 ಗಿಡಕ್ಕೆ ₹ 42 ಪಡೆಯಲು ಮುಂದಾಗಿದೆ. ಇದರ ಒಟ್ಟು ಮೊತ್ತ ₹ 10,626 ಕೋಟಿ ಆಗುತ್ತದೆ. ಇದೊಂದು ಆತಂಕಕಾರಿ ವಿಚಾರ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
‘ಈ ಅರ್ಜಿ ಇತ್ಯರ್ಥವಾಗುವ ತನಕ ಇಶಾ ಫೌಂಡೇಶನ್ ಕಾವೇರಿ ಕೂಗು ಯೋಜನೆಯಡಿ ಯಾವುದೇ ಹಣ ಸಂಗ್ರಹ ಮಾಡದಂತೆ ತಡೆ ನೀಡಬೇಕು’ ಎಂದು ಕೋರಿದ್ದಾರೆ.