ದಾಬಸ್ಪೇಟೆ: ಜಾಜೂರು ಗ್ರಾಮದ ಮಂಜುನಾಥ್ ಅವರ ತೋಟಕ್ಕೆ ಬೆಂಕಿ ಬಿದ್ದು, 15 ತೆಂಗಿನ ಮರ, 109 ಸೀಬೆಗಿಡ, 4 ಮಾವಿನ ಗಿಡಗಳು ಸುಟ್ಟಿವೆ.
ತೆಂಗಿನ ಮರಕ್ಕೆ ಮತ್ತು ಸೀಬೆಗಿಡಗಳಿಗೆ ನೀರುಣಿಸಲು ಹಾಕಿದ್ದ ಹನಿ ನೀರಾವರಿ ಕೊಳವೆ ಸಹ ಬೆಂಕಿಗೆ ಆಹುತಿಯಾಗಿದೆ.
ಪಕ್ಕದಲ್ಲಿಯೇ ಇರುವ ರಾಮೇಗೌಡರ ಏಳು ಎಕರೆ, ಶಿವರುದ್ರಯ್ಯನವರ ನಾಲ್ಕು ಎಕರೆ ನೀಲಗಿರಿ ತೋಪು ಹಾಗೂ ನಲವತ್ತು ತೇಗದ ಮರಗಳು ಪೂರ್ಣ ಸುಟ್ಟು ಕರಕಲಾಗಿದ್ದು. ಐದು ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎನ್ನಲಾಗುತ್ತಿದೆ.
‘ಯಾರೋ ಕಿಡಿಗೇಡಿಗಳು ರಸ್ತೆಯ ಬದಿಯಲ್ಲಿ ಬೆಂಕಿ ಇಟ್ಟಿದ್ದಾರೆ. ಬೇಸಿಗೆಯಾದ್ದರಿಂದ ಬೇಲಿ ಒಣಗಿತ್ತು. ರಸ್ತೆ ಬದಿಯಿಂದ ಏರಿಗೆ ಬಂದ ಬೆಂಕಿ, ಕ್ರಮೇಣ ಪಕ್ಕದಲ್ಲಿನ ನೀಲಗಿರಿ ತೋಟಕ್ಕೆ ಆವರಿಸಿಕೊಂಡು ಹೊತ್ತಿ ಉರಿಯಿತು’ ಎಂದು ಮಂಜುನಾಥ್ ತಿಳಿಸಿದರು.
’ನೀಲಗಿರಿ ತೋಟದ ಪಕ್ಕದಲ್ಲಿಯೇ ತೆಂಗಿನ ತೋಟ, ಸೀಬೆ ತೋಟ ಇದ್ದರಿಂದ ಬೆಂಕಿಯ ರಭಸಕ್ಕೆ ಅವೆಲ್ಲಾ ಸುಟ್ಟವು. ಕಿಡಿ ಸಿಡಿದು ತೆಂಗಿನ ಮರಗಳ ಸುಳಿಗಳು ಹೊತ್ತಿಕೊಂಡವು. ದಟ್ಟ ಹೊಗೆ ಆವರಿಸಿತ್ತು’ ಎಂದರು.