ನೆಲಮಂಗಲ: ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಕಾರಿನಲ್ಲಿ ತೆರಳಿ ವಾಪಸಾಗುತ್ತಿದ್ದ ಒಂದೇ ಕುಟುಂಬದ ಐವರು ಸಮೀಪದ ಯಂಟಗಾನಹಳ್ಳಿ ಬಳಿ ಸೋಮವಾರ ತಡರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಾರಿನ ಚಾಲಕ, ಬೆಂಗಳೂರಿನ ನಾಯಂಡಹಳ್ಳಿಯ ಪಂತರಪಾಳ್ಯದ ನಿವಾಸಿ, ಗುತ್ತಿಗೆದಾರ ಏಳುಮಲೈ(43), ಪತ್ನಿ ಕಮಲಾ(35), ಮಗಳು ಗೀತಾ(10), ಕಿರಣ್(13), ಗಿರಿಧರ್(14) ಮೃತಪಟ್ಟವರು. ಬಸ್ ಚಾಲಕ ಭೀಮಾ ರಾವ್ ಹಾಗೂ ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿವೆ. ಅವರನ್ನು ನೆಲಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅಪಘಾತ ಸಂಭವಿಸಿದೆ. ‘ಬೆಂಗಳೂರಿನಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಐರಾವತ ಬಸ್ ಮತ್ತು ಸ್ಕಾರ್ಪಿಯೋ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ರಸ್ತೆ ವಿಭಜಕ ದಾಟಿ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಬೆಂಗಳೂರು ಪೋಲೀಸ್ ವರಿಷ್ಠಾಧಿಕಾರಿ ಸುಜೀತ್, ಡಿವೈಎಸ್ಪಿ ಪಾಂಡುರಂಗ, ಸಾರಿಗೆ ನಿಯಂತ್ರಕ ಇನಾಯತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೆಲಮಂಗಲ ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.