ಬೆಂಗಳೂರು: ‘ಶಬರಿಮಲೆಗೆ ಮಹಿಳೆಯರು ಹೋಗಬೇಕೋ ಬೇಡವೋ ಅನ್ನುವ ಚರ್ಚೆ ನಡೆಯುತ್ತಿದೆ. ಜೈವಿಕ ಕಾರಣಗಳನ್ನು ಇಟ್ಟುಕೊಂಡು ದೇವಸ್ಥಾನ ಮೈಲಿಗೆಯಾಗುತ್ತದೆ ಎಂದು ಹೇಳುವುದು ಎಷ್ಟು ಸರಿ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ, ಎಫ್ಕೆಸಿಸಿಐ ಆಯೋಜಿಸಿದ್ದ ‘ಉದ್ಯಮಶೀಲ ಮಹಿಳೆಯರ ದಿನಾಚರಣೆ’ಯಲ್ಲಿ ಭಾಗವಹಿಸಿ ಮಾತನಾಡಿದರು.
‘ಮಹಿಳೆಯರ ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಪೂರ್ವಗ್ರಹಪೀಡಿತ ಸಮಾಜ ಇದಕ್ಕೆ ಆಸ್ಪದ ನೀಡುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಮೀಸಲಾತಿ ಸಿಗದಿದ್ದರೆ ರಾಜಕೀಯದಲ್ಲಿ ಮಹಿಳೆಯ ಪಾತ್ರ ಹೆಚ್ಚುತ್ತಿರಲಿಲ್ಲ. ಸಮಾಜ ತಾನಾಗಿಯೇ ಬದಲಾಗುತ್ತಿಲ್ಲ. ಕಾನೂನು ಸಮಾಜವನ್ನು ಬದಲಾಗುವಂತೆ ಒತ್ತಾಯಿಸುವ ಪರಿಸ್ಥಿತಿ ಇದೆ’ ಎಂದರು.
ನಿವೃತ್ತ ಐಎಎಸ್ ಅಧಿಕಾರಿ, ರತ್ನಪ್ರಭಾ ‘ಸಾಮಾಜಿಕ ಜಾಲತಾಣವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿರುವ ಮಹಿಳೆಯರು ಆನ್ಲೈನ್ ಮೂಲಕ ಮನೆಯಲ್ಲಿಯೇ ಕುಳಿತು ಉತ್ಪನ್ನಗಳನ್ನು ಮಾರುತ್ತಿದ್ದಾರೆ. ಈ ಬದಲಾವಣೆಗಳು ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪೂರಕ’ ಎಂದರು.
ಸ್ವಾವಲಂಬಿಯಾಗಿ ಉದ್ಯಮ ನಡೆಸುತ್ತಿರುವ ನಾಲ್ವರು ಮಹಿಳೆಯರಿಗೆ ಗೌರವ ಸಲ್ಲಿಸಲಾಯಿತು. ಯಾದಗಿರಿಯ ಜಯಲಕ್ಷ್ಮಿ ಕಾಟನ್ ಮಿಲ್ಸ್ನ ಸುಧಾ ರಾಠಿ, ಲಕ್ಷ್ಮಿ ಮಹಿಳಾ ಸೇವಾದ ಶೀಲಾ, ಧಾನೇಶ್ವರಿ ಗಾರ್ಮೆಂಟ್ಸ್ನ ಭಾರತಿ, ಧರ್ಮಾ ಟೆಕ್ನಾಲಜಿಸ್ನ ಶೈಲಜಾ ಅವರನ್ನು ಸನ್ಮಾನಿಸಲಾಯಿತು.