ಬೆಂಗಳೂರು: ಪಿಯುಸಿ ಮುಗಿಸಿ ಭವಿಷ್ಯದ ಕನಸು ಕಾಣುತ್ತಿದ್ದ 16 ರ ಬಾಲಕಿ ಹಠಾತ್ ನಿಧನ ಆಕೆಯ ಪಾಲಕರು ಮತ್ತು ಪ್ರೀತಿ ಪಾತ್ರರಿಗೆ ತುಂಬಲಾಗದ ನೋವು ತಂದಿತ್ತು. ಆದರೆ, ಆಕೆಯ ಸಾವಿನಲ್ಲೂ ಸಾರ್ಥಕತೆ ಕಾಣುವ ನಿರ್ಧಾರವನ್ನು ಪಾಲಕರು ತೆಗೆದುಕೊಂಡ ಪರಿಣಾಮ ಐದು ಅಂಗಾಂಗಗಳನ್ನು ದಾನವಾಗಿ ಪಡೆಯಲಾಗಿದೆ.
ತಲೆ ನೋವು ಮತ್ತು ವಾಂತಿಯ ಬಳಿಕ ಪ್ರಜ್ಞೆ ತಪ್ಪಿದ ಬಾಲಕಿಯನ್ನು ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಗೆ ಒಯ್ಯಲಾಯಿತು. ತಲೆ ಬುರುಡೆಯಲ್ಲಿ ಸ್ರಾವದಿಂದ ಮಿದುಳು ನಿಷ್ಕ್ರಿಯ ಆಗಿದೆ ಎಂದು ವೈದ್ಯರು ಘೋಷಿಸಿದರು.
ಕುಟುಂಬದವರ ಒಪ್ಪಿಗೆ ಪಡೆದು ಐದು ಅಂಗಾಂಗಗಳನ್ನು ದಾನ ಪಡೆಯಲಾಯಿತು. ಒಂದು ಮೂತ್ರ ಪಿಂಡ ಮತ್ತು ಕರುಳನ್ನು ಫೋರ್ಟಿಸ್ ಆಸ್ಪತ್ರೆಗೆ, ಹೃದಯದ ಕವಾಟವನ್ನು ಮಣಿಪಾಲ ಆಸ್ಪತ್ರೆಗೆ, ಕಾರ್ನಿಯಾವನ್ನು ಶಂಕರ ಆಸ್ಪತ್ರೆಗೆ, ಇನ್ನೊಂದು ಮೂತ್ರಪಿಂಡವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ನೀಡಲಾಯಿತು.
ಅತ್ಯಂತ ದುಃಖದ ಸಂದರ್ಭದಲ್ಲೂ ಅಂಗಾಂಗಗಳು ಆರು ವ್ಯಕ್ತಿಗಳಿಗೆ ಜೀವದಾನ ಮತ್ತು ದೃಷ್ಟಿ ದಾನ ಮಾಡುವ ಮೂಲಕ ಬಾಲಕಿ ಯ ತಾಯಿ ಮಾನವೀಯತೆ ಮೆರೆದರು ಎಂದು ಫೋರ್ಟಿಸ್ ಪ್ರಕಟಣೆ ತಿಳಿಸಿದೆ.