ಬೆಂಗಳೂರು: 'ವಿದ್ಯಾರ್ಥಿಗಳು ಕ್ಯಾಂಟೀನ್ ಮತ್ತು ಮೈದಾನಗಳಲ್ಲಿ ಕಾಲಹರಣ ಮಾಡುವ ಬದಲಿಗೆ, ಕುವೆಂಪು ಅವರ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಅವರನ್ನು ಆದರ್ಶವಾಗಿಟ್ಟುಕೊಂಡು ಕನ್ನಡ ಕಾವ್ಯ ಕಟ್ಟಲು ಮುಂದಾಗಬೇಕು’ ಎಂದು ಸರ್ವೋದಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಜಿ.ಟಿ.ನರೇಂದ್ರಕುಮಾರ್ ಅಭಿಪ್ರಾಯಪಟ್ಟರು.
ಕುವೆಂಪು ಅವರ ವೈಚಾರಿಕ ಸಾಹಿತ್ಯವನ್ನು ಪರಿಚಯಿಸುವ ಉದ್ದೇಶದಿಂದ ಮಹಾರಾಣಿ ಕಲಾ ಕಾಲೇಜಿನ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಆಯೋಜಿಸಿದ್ದ ‘ಯುವಜನರಿಗಾಗಿ ಕುವೆಂಪು; ಕುವೆಂಪು ಓದು ಅಭಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕುವೆಂಪು ಅವರು ಯಾವುದೇ ಪ್ರಭುತ್ವದ ದಬ್ಬಾಳಿಕೆಗೆ ಹೆದರಲಿಲ್ಲ. ಅವರ ಕೃತಿಗಳಲ್ಲಿದ್ದ ಪುರೋಹಿತಶಾಹಿ ವಿರೋಧಿ ಧೋರಣೆಯನ್ನು ಎಷ್ಟೋ ಮಂದಿ ವಿರೋಧಿಸಿದ್ದರು’ ಎಂದು ನೆನಪಿಸಿಕೊಂಡರು.
ಸಾಹಿತಿ ವಡ್ಡಗೆರೆ ನಾಗರಾಜಯ್ಯ, ‘ಮನುಜ ಮತ, ವಿಶ್ವಪಥ ಎಂದು ಧರ್ಮ, ಜಾತಿಗಳ ಗೋಡೆ ದಾಟಿ ನಿರುಕುಂಶಮತಿಗಳಾಗಿ ಎಂದು ಕರೆ ನೀಡಿದ ದಾರ್ಶನಿಕರು. ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ಕುವೆಂಪು ಅವರು ತಮ್ಮ ಅಗಾಧ ಪಾಂಡಿತ್ಯದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ' ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಲೋಕಪ್ಪಗೌಡ, ‘ಮಹಾಕಾವ್ಯ, ಜೀವನ ಚರಿತ್ರೆ, ನಾಟಕ, ಕತೆ, ಕಾದಂಬರಿ, ಮಕ್ಕಳ ಸಾಹಿತ್ಯ, ವೈಚಾರಿಕ ಬರಹ ಹೀಗೆ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿದ ಮಹಾನ್ ಚೇತನ’ ಎಂದು ಹೇಳಿದರು.
ನೆಲಸಿರಿ ಟ್ರಸ್ಟ್, ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ಈ ಅಭಿಯಾನ ಏರ್ಪಡಿಸಲಾಗುತ್ತಿದೆ.