ಚಿಕ್ಕಮಗಳೂರು: ತಾಲ್ಲೂಕಿನ ಕಾಮೇನಹಳ್ಳಿಯ ಹುಲಿಕಲ್ಲೇಶ್ವರ ದೇಗುಲ ಸಮೀಪದ ಜಮೀನಿನ ಬಳಿ ವಿದ್ಯುತ್ ಸ್ಪರ್ಶದಿಂದ ಗಂಡಾನೆಯೊಂದು ಮೃತಪಟ್ಟಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ‘ಪ್ರಜಾವಾಣಿ’
ಯೊಂದಿಗೆ ಮಾತನಾಡಿ, ‘ಶುಂಠಿ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ಬೇಲಿಯ ತಂತಿ ತಗುಲಿ ಸುಮಾರು 18 ವರ್ಷದ ಗಂಡಾನೆ ಮೃತಪಟ್ಟಿದೆ. ಆನೆಯ ದೇಹದಲ್ಲಿ ತಂತಿ ತಗುಲಿದ ಗುರುತುಗಳು ಇದ್ದವು’ ಎಂದರು.
‘ಜಮೀನಿನವರು ತಂತಿಗೆ ವಿದ್ಯುತ್ ಹರಿಸಿರುವುದೇ ಆನೆ ಸಾವಿಗೆ ಕಾರಣ. ಜಮೀನಿನವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.
‘ವನ್ಯಜೀವಿ ವಿಭಾಗದ ಡಾ.ನಾಗೇಶ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಕಳೇಬರನ್ನು ಸುಡಲಾಯಿತು’ ಎಂದರು.
ಡಿಎಫ್ಒ ಎಚ್.ಆರ್.ಕುಮಾರ್, ಆರ್ಎಫ್ಒ ಶಿಲ್ಪಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.