ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಬಾರಿ ಗೆಲುವಿನ ದಡ ಸೇರಬೇಕೆಂದು ಹಂಬಲಿಸಿ ಸಂಸದ ಎಂ.ವೀರಪ್ಪ ಮೊಯಿಲಿ ಅವರು ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರದಾದ್ಯಂತ ಓಡಾಡುತ್ತಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ‘ಗೋ ಬ್ಯಾಕ್ ವೀರಪ್ಪ ಮೊಯಿಲಿ’ ಅಭಿಯಾನವೊಂದು ಶುರುವಾಗಿದೆ.
‘ಗೋ ಬ್ಯಾಕ್ ವೀರಪ್ಪ ಮೊಯಿಲಿ ಫ್ರಮ್ ಚಿಕ್ಕಬಳ್ಳಾಪುರ’ ಹ್ಯಾಷ್ ಟ್ಯಾಗ್ನಲ್ಲಿ ಫೇಸ್ಬುಕ್ನಲ್ಲಿ ಶುರುವಾಗಿರುವ ಈ ಅಭಿಯಾನವನ್ನು ನೆಟ್ಟಿಗರು ಇತರರೊಂದಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಈ ಪೋಸ್ಟ್ಗೆ ಬಹುಪಾಲು ಮೊಯಿಲಿ ಅವರ ವಿರುದ್ಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಬಹುತೇಕರು ‘ಗೋ ಬ್ಯಾಕ್’ ಎಂದು ಪ್ರತಿಕ್ರಿಯಿಸಿದರೆ, ಸತೀಶ್ ರೆಡ್ಡಿ ಎಂಬುವರು, ‘ಅಪ್ಪಾ ಸತ್ಯ ಹರಿಶ್ಚಂದ್ರ ಕಣೋ ಇವರು, ಎತ್ತಿನಹೊಳೆ ಬಂತು, ಎಚ್.ಎನ್.ವ್ಯಾಲಿ ಮುಗಿತು, ಮುಂದೆ ಕೃಷ್ಣಾ ನದಿ ನೀರು ಬಿಡ್ತಾರಂತೆ’ ಎಂದು ಕಾಮೆಂಟ್ ಹಾಕುವ ಮೂಲಕ ತಮ್ಮ ಒಳಗಿನ ಅಸಮಾಧಾನ ತೋಡಿಕೊಂಡಿದ್ದಾರೆ.
ಆದರೆ, ಮೊಯಿಲಿ ಅವರನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸಿಗರು, ‘ಮೊಯಿಲಿ ಅವರನ್ನು ಕಂಡರೆ ಆಗದೆ ಇರುವ ಕೆಲವರು ಅವರು ಏನು ಮಾಡಿದ್ದಾರೆ ಎಂದು ಕೇಳಬಹುದು. ಆದರೆ ಜಿಲ್ಲೆಗೆ ಮೊಯಿಲಿ ಅವರ ಕೊಡುಗೆಗೆ ಸಾಕಷ್ಟು ಆಧಾರಗಳಿವೆ’ ಎಂದು ಸಮರ್ಥಿಸುತ್ತಿದ್ದಾರೆ.