ಕೆಂಗೇರಿ: ‘ಹೃದಯ ಬೇನೆಗೆ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಶೇ 25ರಷ್ಟು ರೋಗಿಗಳು 20ರಿಂದ 40ರ ನಡುವಿನ ವಯೋಮಾನದವರು. ಧೂಮಪಾನ, ಮದ್ಯಪಾನದಂತಹ ದುಶ್ಚಟಗಳಿಗೆ ದಾಸರಾಗುತ್ತಿರುವುದು ಇದಕ್ಕೆ ಕಾರಣ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಹೇಳಿದರು.
ಇಲ್ಲಿನ ಚನ್ನಸಂದ್ರದಲ್ಲಿರುವ ಆರ್.ಎನ್.ಎಸ್. ತಾಂತ್ರಿಕ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಮೈ ಮೈಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವ್ಯಾಯಾಮದ ಕೊರತೆಯು ಈ ಕಾಯಿಲೆ ಹೆಚ್ಚಾಗಲು ಕಾರಣ. ಅಲ್ಲದೆ,ಮಿತಿ ಮೀರಿದ ವಾಯುಮಾಲಿನ್ಯ ಧೂಮಪಾನಕ್ಕಿಂತ ಹೆಚ್ಚಿನ ದುರಂತ ಸೃಷ್ಟಿಸುತ್ತಿದೆ’ ಎಂದರು.
ಬಿಪಿಎಲ್ ಹೊಂದಿರದವರೆಲ್ಲ ಶ್ರೀಮಂತರಲ್ಲ:‘ಬಿಪಿಎಲ್ ಪಡಿತರ ಚೀಟಿ ಹೊಂದಿರದ ಬಡವರನ್ನು ವೈದ್ಯಕೀಯ ಸೇವೆ ಸೇರಿದಂತೆ ಇನ್ನಿತರ ಹಲವು ಸವಲತ್ತುಗಳಿಂದ ವಂಚಿತಗೊಳಿಸುವುದು ಎಷ್ಟು ಸರಿ. ಈ ಕಾರ್ಡ್ ಹೊರದವರೆಲ್ಲ ಶ್ರೀಮಂತರಲ್ಲ’ ಎಂದು ಮಂಜುನಾಥ್ ಹೇಳಿದರು.