ಇದೇ ಅವ್ಯವಸ್ಥೆ ಸಾಸಲು ಹೋಬಳಿಯ ಕೊಚ್ಚಿಗೆಮಚ್ಚೇನಹಳ್ಳಿ ಗ್ರಾಮದ ಜನರದ್ದು ಸಹ ಆಗಿದೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಇದ್ದ ಏಕೈಕ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಮೋರಿ, ಮೂರು ತಿಂಗಳ ಹಿಂದೆಯೇ ಬಿದ್ದ ಮಳೆಗೆ ಕೊಚ್ಚಿಹೋಗಿತ್ತು. ಜನರ ಒತ್ತಾಯದ ಮೇರೆಗೆ ತಾತ್ಕಾಲಿಕವಾಗಿ ಬೃಹತ್ ಪೈಪ್ಗಳನ್ನು ಹಾಕಿ ನಿರ್ಮಿಸಿದ್ದ ಮೋರಿಯೂ ಈಗ ಕೊಚ್ಚಿ ಹೋಗಿದೆ. ಹೀಗಾಗಿ ಗ್ರಾಮದ ಜನರು ಮಳೆ ನೀರು ನಿಂತ ನಂತರವಷ್ಟೇ ಕಾಲ್ನಡಿಗೆಯಲ್ಲಿ ಗ್ರಾಮಕ್ಕೆ ಹೋಗುವಂತಾಗಿದೆ. ಶಾಲಾ ಮಕ್ಕಳು ಮೋರಿಯಲ್ಲಿನ ನೀರಿನಲ್ಲೇ ನಡೆದು ಹೋಗುವ ಸ್ಥಿತಿ ಇದೆ.