ಬೆಂಗಳೂರು: ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವತಿಯಿಂದ ನೈರ್ಮಲ್ಯ ಯೋಜನೆಯಡಿ ನಿರ್ಮಿಸಿದ ಸಮುದಾಯ ಶೌಚಾಲಯದ ಕಟ್ಟಡ ಉದ್ಘಾಟನೆಗೊಳ್ಳದೇ ಪಾಳು ಬಿದ್ದಿದೆ.
2008ರಲ್ಲಿ ₹2 ಲಕ್ಷ ವೆಚ್ಚದಲ್ಲಿ ಸಮುದಾಯ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಇದಕ್ಕೆ ಬೇಕಾದ ನೀರು, ವಿದ್ಯುತ್ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗಿದೆ. ಆದರೆ ಕಟ್ಟಡ ನಿರ್ಮಾಣವಾಗಿ ಹತ್ತು ವರ್ಷವಾದರೂ ಉದ್ಘಾಟನೆಗೊಳ್ಳಲಿಲ್ಲ. ಸಾರ್ವಜನಿಕರ ಉಪಯೋಗಕ್ಕೂ ಲಭ್ಯವಾಗಿಲ್ಲ.
‘ಗ್ರಾಮದ ಜನಸಂಖ್ಯೆ 300 ಇದ್ದ ಕಾಲದಲ್ಲಿ ಈ ಶೌಚಾಲಯವನ್ನು ಕಟ್ಟಿಸಲಾಗಿತ್ತು. ಆಗ ಗ್ರಾಮಸ್ಥರು ಬಯಲಿನಲ್ಲಿಯೇ ಶೌಚಕ್ಕೆ ಹೋಗುತ್ತಿದ್ದರು. ಈಗ ಮನೆಗೆ ಒಂದರಂತೆ ಶೌಚಾಲಯಗಳು ಆಗಿವೆ. ಆದರೆ ಕಟ್ಟಡವನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಂಡಿದ್ದರೆ, ಕೆಲವರಿಗಾದರೂ ಅನುಕೂಲ ಆಗುತ್ತಿತ್ತು’ ಎಂದು ಗ್ರಾಮದ ನಿವಾಸಿ ಗೋವಿಂದರಾಜು ಹೇಳಿದರು.
‘ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ ಈಗ ಸುಮಾರು 680 ಜನ ವಾಸಿಸುತ್ತಿದ್ದಾರೆ. ಬಹುತೇಕ ಮನೆಗಳಲ್ಲಿ ಶೌಚಾಲಯ ಇದೆ. ಸಮುದಾಯ ಶೌಚಾಲಯವನ್ನು ಉಪಯೋಗಿಸುವಂತಹ ಜನರು ಇಲ್ಲಿ ಇಲ್ಲ. ಕಟ್ಟಡವನ್ನು ಬೇರೆ ಉಪಯೋಗಕ್ಕೆ ಬಳಸಿಕೊಳ್ಳಬಹುದಿತ್ತು’ ಎನ್ನುವುದು ಗ್ರಾಮಸ್ಥರ ಮಾತು.
ಗ್ರಾಮದ ಅಭಿವೃದ್ಧಿ ಅಧಿಕಾರಿ ನಾರಾಯಣ ಸ್ವಾಮಿ, ‘ಈ ಕಟ್ಟಡವನ್ನು ಕೆಡವಿ ಬೇರೆ ಉಪಯೋಗಕ್ಕೆ ಬಳಸಲು ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಅವರು, ಮುಂದೆ ಜನಸಂಖ್ಯೆ ಬೆಳೆದಾಗ ಈ ಶೌಚಾಲಯ ಉಪಯೋಗಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಕಟ್ಟಡವನ್ನು ಹಾಗೇ ಉಳಿಸಿಕೊಂಡಿದ್ದೇವೆ’ ಎಂದರು.