ಬೆಂಗಳೂರು: ‘ನನ್ನ ಆಪ್ತ ಸಹಾಯಕ ಮೋಹನ್ ಬಳಿ ₹ 25.76 ಲಕ್ಷ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ನನ್ನ ವಿರುದ್ಧ ವರದಿ ಬಿತ್ತರಿಸುವುದನ್ನು ನಿರ್ಬಂಧಿಸಬೇಕು’ ಎಂದು ಕೋರಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಟಿ.ವಿ.ಚಾನೆಲ್ಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಪ್ರತಿವಾದಿಗಳಾದ ಟಿ.ವಿ.9, ಪಬ್ಲಿಕ್ ಟಿ.ವಿ, ಸುವರ್ಣ ನ್ಯೂಸ್ ಚಾನೆಲ್, ದಿಗ್ವಿಜಯ ನ್ಯೂಸ್ ಚಾನೆಲ್ಗಳ ಮುಖ್ಯ ಸಂಪಾದಕರಿಗೆ ನೋಟಿಸ್ ಜಾರಿಗೊಳಿಸುವಂತೆ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ನಿರ್ದೇಶಿಸಿದೆ.
ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಲಾಗಿದೆ.
ಈ ಮೊದಲು ಪುಟ್ಟರಂಗಶೆಟ್ಟಿ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಸುದ್ದಿ ಬಿತ್ತರಿಸದಂತೆ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಬೇಕು’ ಎಂದು ನಗರದ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅ ಅರ್ಜಿಯಲ್ಲಿ ತಾತ್ಕಾಲಿಕ ಪರಿಹಾರ ಸಿಗದ ಕಾರಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.