ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿನ ಅಧಿಕಾರಿಗಳು ಇಲಾಖಾ ಸಿಬ್ಬಂದಿಯ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬಹುತೇಕ ವಿಧಾನ ಪರಿಷತ್ ಸದಸ್ಯರು ಸಚಿವ ಜಿ.ಟಿ.ದೇವೇಗೌಡರಿಗೆ ದೂರಿತ್ತರು.
ಇಲಾಖಾ ವ್ಯಾಪ್ತಿಯ ಬೋಧಕ ಮತ್ತು ಬೋಧಕೇತರರ ಕುಂದು–ಕೊರತೆಗಳು ಹಾಗೂ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ನಗರದಲ್ಲಿನ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ನಡೆದ ಸಭೆಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು.
‘ಇಲಾಖೆ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಲಂಚ ಕೊಡದೆ ಯಾವೊಂದು ಕಡತವೂ ವಿಲೇವಾರಿ ಆಗುವುದಿಲ್ಲ. ವ್ಯವಸ್ಥೆಯನ್ನು ಸರಿಪಡಿಸಲು ಸಚಿವರನ್ನು ಒತ್ತಾಯಿಸಿದೆವು’ ಎಂದು ಸಭೆಯಲ್ಲಿದ್ದ ಪರಿಷತ್ ಸದಸ್ಯರೊಬ್ಬರು ತಿಳಿಸಿದರು.