ಬೆಂಗಳೂರು: ನಗರದ ಐದು ವಲಯಗಳಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಸೇರಿದಂತೆ 110 ಮಳಿಗೆಗಳಿಗೆ ಪಾಲಿಕೆ ಆರೋಗ್ಯಾಧಿಕಾರಿಗಳು ಬುಧವಾರ ರಾತ್ರಿ ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿದರು. ಶುಚಿತ್ವ ಕಾಪಾಡದ ಹಾಗೂ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ಗಳಲ್ಲಿ ಕಟ್ಟಿಕೊಡುತ್ತಿದ್ದ ಹೋಟೆಲ್ಗಳಿಗೆ ದಂಡ ವಿಧಿಸಿದರು.
ಶುಚಿತ್ವ ಕಾಪಾಡದ, ಹಸಿ ಮತ್ತು ಒಣ ಕಸವನ್ನು ವಿಂಗಡಿಸದ ಕಾರಣ ಕೋರಮಂಗಲದಲ್ಲಿ ಹಾಗೂ ರಾಜಾಜಿನಗರದಲ್ಲಿ ತಲಾ 2 ಹೋಟೆಲ್ಗಳಿಗೆ ಅಧಿಕಾರಿಗಳು ಬೀಗ ಹಾಕಲಾಗಿದೆ. ದಾಳಿಯ ವೇಳೆ ಒಟ್ಟು 1,074 ಕೆ.ಜಿ. ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹ 14.42 ಲಕ್ಷ ದಂಡ ವಿಧಿಸಲಾಗಿದೆ.
‘ಆಹಾರ ಪದಾರ್ಥಗಳನ್ನು ಕಟ್ಟಿಕೊಡಲು ಪ್ಲಾಸ್ಟಿಕ್ ಬಳಸದಂತೆ ನಾವು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಹೋಟೆಲ್ ಮಾಲೀಕರು ಈ ಪರಿಪಾಠ ನಿಲ್ಲಿಸಿರಲಿಲ್ಲ. ಹಾಗಾಗಿ ದಿಡೀರ್ ದಾಳಿ ನಡೆಸುವ ತೀರ್ಮಾನಕ್ಕೆ ಬಂದೆವು’ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೋಟೆಲ್ಗಳು ಬೇಸಿಗೆಯಲ್ಲಿ ಶುಚಿತ್ವದ ಬಗ್ಗೆ ತೀವ್ರ ನಿಗಾ ವಹಿಸುವುದು ತೀರಾ ಅಗತ್ಯ. ಇಲ್ಲದಿದ್ದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಶುಚಿತ್ವ ಕಾಪಾಡದ ಹೋಟೆಲ್ಗಳಿಗೂ ದಂಡ ವಿಧಿಸಿದ್ದೇವೆ’ ಎಂದರು.
‘ಆಹಾರ ಪದಾರ್ಥಗಳನ್ನು ಕಟ್ಟಿಕೊಡಲು ಪ್ಲಾಸ್ಟಿಕ್ ಸಾಮಗ್ರಿ ಬಳಸಬಾರದು ಎಂದು ಹೋಟೆಲ್ ಮಾಲೀಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡುತ್ತಿದ್ದೇವೆ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಿಸುವವರೆಗೂ ದಿಢೀರ್ ದಾಳಿ ಮುಂದುವರಿಯಲಿದೆ’ ಎಂದರು.