ಬೆಂಗಳೂರು: ಮದ್ಯದ ಅಮಲಿನಲ್ಲಿ ವೇಗವಾಗಿ ಕ್ಯಾಬ್ ಚಾಲನೆ ಮಾಡಿಕೊಂಡು ಬಂದು, ಹೊಯ್ಸಳ ವಾಹನಕ್ಕೆ ಡಿಕ್ಕಿ ಮಾಡಿದ ಮಧುಸೂದನ್ ಎಂಬಾತನನ್ನು ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯಪುರ ಠಾಣೆಯ ಮೂವರು ಗಸ್ತು ಪೊಲೀಸರು, ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ ಬಳಿ ಹೊಯ್ಸಳ ವಾಹನ ನಿಲ್ಲಿಸಿಕೊಂಡಿದ್ದರು. ಈ ವೇಳೆ ಸಾರಕ್ಕಿ ಕಡೆಯಿಂದ ಬಂದ ಕ್ಯಾಬ್, ಹಿಂದಿನಿಂದ ಹೊಯ್ಸಳಕ್ಕೆ ಗುದ್ದಿದೆ.
ಡಿಕ್ಕಿಯ ರಭಸಕ್ಕೆ ಹೊಯ್ಸಳ ವಾಹನ ಸ್ವಲ್ಪ ಮುಂದೆ ಸಾಗಿ ಮೆಟ್ರೊ ಪಿಲ್ಲರ್ಗೆ ಅಪ್ಪಳಿಸಿದೆ. ತಕ್ಷಣ ನೆರವಿಗೆ ಧಾವಿಸಿದ ಸ್ಥಳೀಯರು, ವಾಹನಗಳಲ್ಲಿದ್ದ ಪೊಲೀಸರನ್ನು ಹಾಗೂ ಮಧುಸೂದನ್ನನ್ನು ಹೊರಗೆ ಎಳೆದಿದ್ದಾರೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಹೇಳಿದರು.
ಆಲ್ಕೋಮೀಟರ್ ಮೂಲಕ ಮಧುಸೂದನ್ನನ್ನು ತಪಾಸಣೆಗೆ ಒಳಪಡಿಸಿದಾಗ, ದೇಹದಲ್ಲಿ 124 ಮಿ.ಗ್ರಾಂ ಮದ್ಯದ ಪ್ರಮಾಣವಿತ್ತು. ಹೀಗಾಗಿ, ಆತನನ್ನು ಬಂಧಿಸಿ ಕ್ಯಾಬ್ ಜಪ್ತಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.