ಬೆಂಗಳೂರು: ‘ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ (ಎಚ್ಎಸ್ವಿ) ರೋಗದ ಕುರಿತಾಗಿ ಇರುವ ವೈದ್ಯಕೀಯ ಮತ್ತು ಕಾನೂನಾತ್ಮಕ ಅಂಶಗಳ ಬಗ್ಗೆ ಬೆಳಕು ಚೆಲ್ಲಲು ಸಹಕರಿಸಿ’ ಎಂದು ಹೈಕೋರ್ಟ್ ಸರ್ಕಾರದ ಪರ ಹಿರಿಯ ವಕೀಲರಿಗೆ ಸೂಚಿಸಿದೆ.
‘ನನ್ನ ಪತಿ ಮದುವೆಗೂ ಮುನ್ನ ಎಚ್ಎಸ್ವಿ ರೋಗ ಹೊಂದಿದ್ದರು. ಇದನ್ನು ಮುಚ್ಚಿಟ್ಟ ಪತಿ ನನಗೆ ಇದನ್ನು ವರ್ಗಾಯಿಸಿ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಂಗಳವಾರ ಪ್ರಾಸಿಕ್ಯೂಷನ್ ಪರ ವಕೀಲ ಎಸ್.ರಾಚಯ್ಯ ಅವರಿಗೆ ನಿರ್ದೇಶಿಸಿದೆ.
‘ಮುಂದಿನ ವಿಚಾರಣೆ ವೇಳೆಗೆ ಈ ರೋಗದ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್, ಅಡ್ವೊಕೇಟ್ ಜನರಲ್ ಹಾಗೂ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ಕೋರ್ಟ್ಗೆ ಹೆಚ್ಚಿನ ಮಾಹಿತಿ ಒದಗಿಸಬೇಕು’ ಎಂದು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ.
ಮುಂದಿನ ವಿಚಾರಣೆ ಇದೇ 8ರಂದು ನಡೆಯಲಿದೆ.
ಪತ್ನಿಯ ದೂರು: ‘ನನ್ನ ಪತಿ ಮುದುವೆಗೂ ಮುನ್ನ ಈ ರೋಗದ ಬಗ್ಗೆ ನನಗೆ ಹೇಳದೆ ಮುಚ್ಚಿಟ್ಟಿದ್ದಾರೆ. ಅವರ ಕುಟುಂಬ ಸದಸ್ಯರು ನನಗೆ ವಂಚಿಸಿದ್ದಾರೆ. ಜೀವನಪರ್ಯಂತ ನರಳುವಂತೆ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ, ಕೌಟುಂಬಿಕ ದೌರ್ಜನ್ಯ ಎಸಗಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂಬುದು ಮಹಿಳೆಯ ದೂರು.
ಈ ಕುರಿತಂತೆ ಪತಿಯ ವಿರುದ್ಧ ಆಕೆ ದಾಖಲಿಸಿರುವ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಪತಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿದೆ.
ವಿಚಾರಣಾ ನ್ಯಾಯಾಲಯದ ಈ ಆದೇಶ ರದ್ದುಪಡಿಸುವಂತೆ ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಏನಿದು ಎಚ್ಎಸ್ವಿ?: ‘ಇದು ಎಚ್ಐವಿಗಿಂತಲೂ ಅಪಾಯಕಾರಿ. ಎಚ್ಎಸ್ವಿ ಇರುವ ಮನುಷ್ಯರ ಖಾಸಗಿ ಭಾಗಗಳಲ್ಲಿ ಅತಿಯಾದ ನೋವು ಹಾಗೂ ತುರಿಕೆ ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಕುಂದುತ್ತದೆ. ಸದಾ ಸುಸ್ತಾಗುವುದು ಈ ರೋಗದ ಪ್ರಮುಖ ಗುಣಲಕ್ಷಣ. ಹೆಚ್ಚಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಇದು ಹರಡುತ್ತದೆ’ ಎಂಬುದು ವೈದ್ಯಕೀಯ ವಿವರಣೆ.